ಕೊರೋನಾ ಎಫೆಕ್ಟ್: ಸಂಕಷ್ಟದಲ್ಲಿ ಪ್ರವಾಸೋದ್ಯಮ ವಲಯ, ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ 3 ಲಕ್ಷ ಜನ!

ಜೀವನೋಪಾಯಕ್ಕೆ ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಂಬಿಕೊಂಡಿದ್ದ ಸುಮಾರು 3 ಲಕ್ಷ ಜನರು ಈ ವರ್ಷ ಕೋವಿಡ್-19ನಿಂದಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಜೀವನೋಪಾಯಕ್ಕೆ ಪ್ರವಾಸೋದ್ಯಮ ಕ್ಷೇತ್ರವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಂಬಿಕೊಂಡಿದ್ದ ಸುಮಾರು 3 ಲಕ್ಷ ಜನರು ಈ ವರ್ಷ ಕೋವಿಡ್-19ನಿಂದಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.

ಪರಿಸ್ಥಿತಿ ಎಷ್ಟು ವಿಷಮಕ್ಕೆ ತಿರುಗಿದೆಯೆಂದರೆ ರಾಜ್ಯ ಸರ್ಕಾರ ಪ್ರವಾಸೋದ್ಯಮ ಕ್ಷೇತ್ರವನ್ನು ಪುನಶ್ಚೇತನಗೊಳಿಸುವ ಬದಲು ಅದರ ಉಳಿವಿಗಾಗಿ ಯೋಚಿಸುತ್ತಿದೆ ಎಂದು ಇಲಾಖೆ ಸಚಿವ ಸಿ ಟಿ ರವಿ ಹೇಳಿದ್ದಾರೆ. ತಜ್ಞರು ಮತ್ತು ಸಂಬಂಧಪಟ್ಟವರು ಮೊದಲಿನ ಸಹಜ ಸ್ಥಿತಿಗೆ ಬರಲು ಇನ್ನು ಕನಿಷ್ಠವೆಂದರೂ 6 ತಿಂಗಳು ಸಮಯ ಬೇಕಾಗಬಹುದು ಎಂದು ಹೇಳುತ್ತಿದ್ದಾರೆ.

ನಿನ್ನೆ ಸಿಎಂ ಯಡಿಯೂರಪ್ಪನವರು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ಜೊತೆ ಪುನರ್ ಪರಿಶೀಲನಾ ಸಭೆ ನಡೆಸಿದ್ದರು. ಕೊರೋನಾ ಬಂದ ಮೇಲೆ ಲಾಕ್ ಡೌನ್ ನಿಂದಾಗಿ ಪ್ರವಾಸೋದ್ಯಮ ಇಲಾಖೆಗೆ 15 ಸಾವಿರ ಕೋಟಿ ರೂಪಾಯಿ ನಷ್ಟವಾಗಿದೆ, ಸುಮಾರು 3 ಲಕ್ಷ ಜನ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ ಎಂದು ಅಧಿಕಾರಿಗಳು ವಿವರಣೆ ನೀಡಿದರು.ಕಳೆದ ಆರ್ಥಿಕ ಸಾಲಿನಲ್ಲಿ ಪ್ರವಾಸೋದ್ಯಮ ಇಲಾಖೆ ರಾಜ್ಯದ ಒಟ್ಟಾರೆ ಜಿಡಿಪಿಯಲ್ಲಿ ಶೇಕಡಾ 15ರಷ್ಟು ನೀಡಿತ್ತು.

ಪ್ರವಾಸೋದ್ಯಮದಿಂದಾಗಿ ಹೊಟೇಲ್ ಗಳು, ಸಾರಿಗೆ ಮತ್ತು ಇತರ ಸಂಬಂಧಪಟ್ಟ ಉದ್ಯಮಗಳಲ್ಲಿ ಸುಮಾರು 35 ಲಕ್ಷ ಮಂದಿ ತೊಡಗಿಸಿಕೊಂಡಿದ್ದಾರೆ. ಇಂದು ವ್ಯಾಪಾರವಿಲ್ಲದೆ ಮಾಲೀಕರು ತಮ್ಮ ಕೆಲಸಗಾರರನ್ನು ತೆಗೆದುಹಾಕಬೇಕಾದ ಪರಿಸ್ಥಿತಿ ಬಂದಿದೆ ಎಂದು ಸಚಿವ ಸಿ ಟಿ ರವಿ ಹೇಳಿದ್ದಾರೆ.

ಜನರನ್ನು ಸ್ಥಳೀಯ ಪ್ರದೇಶಗಳಿಗೆ ಭೇಟಿ ನೀಡಲು ಪ್ರೋತ್ಸಾಹ:ಈ ಕೊರೋನಾ ಸಮಯದಲ್ಲಿ ಅನೇಕ ಸ್ಥಳಗಳಿಗೆ ಪ್ರವೇಶ ಶುಲ್ಕದಲ್ಲಿ ವಿನಾಯ್ತಿ, ಹೊಟೇಲ್ ಗಳಲ್ಲಿ ಬುಕ್ಕಿಂಗ್ ನಲ್ಲಿ ವಿನಾಯ್ತಿ ನೀಡಿದರೂ ಸಹ ಪುನಶ್ಚೇತನ ಅಷ್ಟು ಸುಲಭವಾಗಿ ಬೇಗನೆ ಆಗುವುದಿಲ್ಲ. ಜನರು ಮನೆಯಿಂದ ಹೊರಬಂದು ಪ್ರವಾಸಕ್ಕೆ ಹೋಗಲು ಇಂತಹ ಸಮಯದಲ್ಲಿ ಹಿಂಜರಿಯುತ್ತಾರೆ. ಹೀಗಾಗಿ ಸಹಜತೆಗೆ ಮರಳಲು ತಿಂಗಳುಗಟ್ಟಲೆ ಬೇಕಾಗಬಹುದು. ಅಲ್ಲಿಯವರೆಗೆ ಉದ್ಯಮ ನಡೆಯಲು ನಾವು ಉಪಾಯ, ಪರಿಹಾರಗಳನ್ನು ಕಂಡುಕೊಳ್ಳಲೇಬೇಕು. ಹೀಗಾಗಿ ಜನರಿಗೆ ಸ್ಥಳೀಯ ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡಿ ಎಂದು ಪ್ರೋತ್ಸಾಹಿಸುತ್ತೇವೆ. ಹೊರ ರಾಜ್ಯಗಳಿಂದ, ವಿದೇಶಗಳಿಂದ ಪ್ರವಾಸಿಗರು ಬರಲು ಸಾಧ್ಯವಿಲ್ಲ ಎಂದು ಸಚಿವ ಸಿ ಟಿ ರವಿ ಹೇಳಿದರು.

ಬೇರೆ ಕ್ಷೇತ್ರಗಳಲ್ಲಿ ಕಷ್ಟದಲ್ಲಿರುವವರಿಗೆ ಸರ್ಕಾರ ಸಹಾಯ ಮಾಡಿದಂತೆ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಂಡವರಿಗೆ ಮಾಡಲಿಲ್ಲ.  ಟೂರಿಸ್ಟ್ ಗೈಡ್ ಗಳು ಪ್ರವಾಸಿಗರ ಭೇಟಿ, ಅವರು ಕೊಡುವ ಹಣವನ್ನು ನಂಬಿಕೊಂಡಿರುತ್ತಾರೆ. ಆದರೆ ಕಳೆದ ಮೂರು ತಿಂಗಳಿನಿಂದ ಅವರ ಬದುಕು ದುಸ್ತರವಾಗಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ಗೈಡ್ಸ್ ಅಸೋಸಿಯೇಷನ್ ನ ಮಾಜಿ ಕಾರ್ಯದರ್ಶಿ ಅಶೋಕ್ ಎಸ್ ಜೆ.

ಇದು ಸರಣಿ ಪ್ರತಿಕ್ರಿಯೆ. ಸ್ಥಳೀಯ ಪ್ರವಾಸೋದ್ಯಮಕ್ಕೆ ಸರ್ಕಾರ ಒತ್ತು ನೀಡುತ್ತಿದೆ, ಆದರೆ ಅವರು ತಾವಿರುವ ಸ್ಥಳಗಳಲ್ಲಿರುವ ಪ್ರವಾಸಿ ತಾಣಗಳನ್ನು ನೋಡಲು ಯಾರು ಬಯಸುತ್ತಾರೆ? ಪ್ರವಾಸಿಗರಲ್ಲಿ ಸರ್ಕಾರವು ವಿಶ್ವಾಸವನ್ನು ಮೂಡಿಸುವ ಸಮಯ ಇದಾಗಿದ್ದು, ಇದಕ್ಕಾಗಿ ಅವರು ಕೈಗೊಂಡ ಕ್ರಮಗಳ ಬಗ್ಗೆ ಒತ್ತು ನೀಡಬೇಕು ಕಾರ್ಯ ವಿಧಾನಗಳನ್ನು ಅನುಸರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಬೇಕು. ಸುರಕ್ಷತಾ ಕ್ರಮಗಳನ್ನು ಒದಗಿಸುವ ಮೂಲಕ ಪ್ರವಾಸಿಗರನ್ನು ತಮ್ಮ ವಾಸಸ್ಥಳದ ಹೊರಗೆ ಬೇರೆ ಬೇರೆ ಸ್ಥಳಗಳಿಗೆ ಕರೆದೊಯ್ಯಲು ಅವರು ಪ್ಯಾಕೇಜ್‌ಗಳೊಂದಿಗೆ ಘೋಷಿಸಬೇಕು ಎಂದು ಮಾಜಿ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com