ಬೆಂಗಳೂರು: ರಸ್ತೆ ಮೇಲೆ ಬೇಕಾಬಿಟ್ಟಿ ದುಬಾರಿ ಕಾರು ಚಲಾಯಿಸುತ್ತಿದ್ದವನಿಗೆ ಸ್ಥಳೀಯರು ಧರ್ಮದೇಟು ನೀಡಿರುವ ಘಟನೆ ಭಾನುವಾರ ಆರ್ ಟಿ ನಗರದಲ್ಲಿ ನಡೆದಿದೆ.
ಭಾನುವಾರದಂದು ರಸ್ತೆಗಳು ಖಾಲಿ ಇದ್ದ ಕಾರಣ ತಮ್ಮ ದುಬಾರಿ ಲ್ಯಾಂಬೋರ್ಗಿನಿ ಕಾರಿನಲ್ಲಿ ಯುವಕರು ಗೆಳತಿಯರೊಂದಿಗೆ ಜಾಲಿ ರೈಡ್ ಹೊರಟಿದ್ದರು. ಜಾಲಿ ಮೂಡ್ ನಲ್ಲಿದ್ದ ಅವರು ರಸ್ತೆಯಲ್ಲಿದ್ದ ಇತರೆ ವಾಹನ ಸವಾರರು, ಸ್ಥಳೀಯರಿಗೆ ಕಿರಿಕಿರಿ ಉಂಟುಮಾಡಿದ್ದರು. ತಕ್ಷಣವೇ ಸಾರ್ವಜನಿಕರು ಯುವಕರನ್ನು ಹಿಡಿದು ಇಬ್ಬರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ ಪರಿಣಾಮ ಇಬ್ಬರನ್ನು ಕಾರಿನಿಂದ ಹೊರಗೆಳೆದು ಧರ್ಮದೇಟು ನೀಡಿದ್ದಾರೆ.
ಅಲ್ಲದೇ, ನಡೆದ ಘಟನೆಯನ್ನು ಸವಿಸ್ತಾರವಾಗಿ ವಿಡಿಯೋ ಮಾಡಿ ಬೆಂಗಳೂರು ಪೊಲೀಸರಿಗೆ ಟ್ವಿಟ್ಟರ್ ಮೂಲಕ ಪೊಸ್ಟ್ ಮಾಡಿದ್ದರು. ತಕ್ಷಣವೇ ವಿಡಿಯೋ ಗಮನಿಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಕೂಡಲೇ ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಂಚಾರಿ ಉತ್ತರ ವಿಭಾಗದ ಡಿಸಿಪಿ ಸರಾ ಫಾತಿಮಾ ಅವರಿಗೆ ಸೂಚನೆ ನೀಡಿದ್ದರು. ಸದ್ಯ ವಿಡಿಯೋವನ್ನು ಆಧರಿಸಿ ಸಂಚಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.
Advertisement