ಚಿಕ್ಕಬಳ್ಳಾಪುರ: ಕೊರೋನಾ ಸೋಂಕಿನಿಂದ ಗುಣಮುಖರಾಗಿ ಮರಳಿ ಕರ್ತವ್ಯಕ್ಕೆ ವಾಪಸ್ ಬಂದ ಪೊಲೀಸ್ ಪೇದೆಯೊಬ್ಬರಿಗೆ ಕೇಂದ್ರವಲಯದ ಐಜಿಪಿ ಕೆ.ವಿ.ಶರತ್ ಚಂದ್ರ ಮತ್ತಿತರೆ ಸಿಬ್ಬಂದಿಯಿಂದ, ಆತ್ಮೀಯ , ಹೃದಯಸ್ಪರ್ಶಿ ಸ್ವಾಗತ ನೀಡಿ, ಆತ್ಮಸ್ಥೈರ್ಯ ತುಂಬಿದ ಅಪರೂಪದ ಘಟನೆಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ಪಿ ಕಚೇರಿ ಆವರಣ ಸಾಕ್ಷಿಯಾಯಿತು.
ಅಷ್ಟೆ ಅಲ್ಲ ಇಂದು ಮರಳಿ ಕರ್ತವ್ಯಕ್ಕೆಹಾಜರಾದ ಪೇದೆಗೆ ಎಸ್ಪಿ ಕಚೇರಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹೂಮಳೆ ಸುರಿಸಿ ಸ್ವಾಗತ ನೀಡಿದ ಮರೆಯಲಾಗದ ದೃಶ್ಯವಾಗಿತ್ತು. ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ಪಿ ಕಚೇರಿಯ ಪೇದೆಯೊಬ್ಬರಿಗೆ ಒಂದು ತಿಂಗಳ ಹಿಂದೆ ಕರೋನ ಸೋಂಕು ತಗುಲಿತ್ತು.
ಲಾಕ್ ಡೌನ್ ಸಂದರ್ಭದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ದುಡಿಯುತ್ತಿದ ಕೊರೊನಾ ಸೇನಾನಿಗಳ ಪೈಕಿ ಒಬ್ಬರಾದ ಪೊಲೀಸರಿಗೆ ಸೋಂಕು ತಗುಲಿದ್ದುದು ಇಲಾಖೆಯ ಸಿಬ್ಬಂದಿಯಲ್ಲಿ ಆತಂಕ ಮೂಡಿಸಿತ್ತು. ಆ ಸಂದರ್ಭದಲ್ಲಿ ಪೇದೆಯ ಕುಟುಂಬಸ್ಥರೂ ಸೇರಿದಂತೆ ಅವರ ಪ್ರಾಥಮಿಕ ಮತ್ತು ದ್ವಿತೀಯ ಹಂತದ ಎಲ್ಲಾ ಸಂಪರ್ಕಿತರನ್ನೂ ಪತ್ತೆ ಮಾಡಿ ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು.
ಆಗಲೂ ಚಿಕ್ಕಬಳ್ಳಾಪುರಕ್ಕೆ ಆಗಮಿಸಿದ್ದ ಕೇಂದ್ರ ವಲಯದ ಐಜಿಪಿ ಕೆ.ವಿ.ಶರತ್ ಚಂದ್ರ ಅವರು ಸೋಂಕಿತ ಪೇದೆ ಮತ್ತು ಅವರ ಕುಟುಂಬಸ್ಥರು ಹಾಗೂ ಇಲಾಖೆಯ ಸಿಬ್ಬಂದಿಗೆ ಧೈರ್ಯ ತುಂಬಿ . ಸೋಂಕಿನಿಂದ ಪಾರಾಗಲು ಮತ್ತಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಗೆ ನಿರ್ದೇಶನ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಿನ್ನೆಯಷ್ಟೇ ಪೇದೆ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದರು. ಸೋಂಕಿನಿಂದ ಮುಕ್ತರಾಗಿ ಇಂದು ಮರಳಿ ಕರ್ತವ್ಯಕ್ಕೆಹಾಜರಾದ ಪೇದೆಗೆ ಎಸ್ಪಿ ಕಚೇರಿಯ ಸಿಬ್ಬಂದಿ ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಪೇದೆಗೆ ಹೂಮಳೆ ಸುರಿಸಿ ಸ್ವಾಗತಿಸಿದರು.
ಈ ವೇಳೆ ಕೇಂದ್ರ ವಲಯದ ಐಜಿಪಿ ಶರತ್ ಚಂದ್ರ ಪೇದೆಗೆ ಮಾಲಾರ್ಪಣೆ ಮಾಡಿ ಹಣ್ಣು ಹಂಪಲು ನೀಡಿ ಶುಭ ಕೋರಿ ಅಪರೂಪದ ಕ್ಷಣಕ್ಕೆ ಸಾಕ್ಷಿಯಾದರು. ಇದು ಪೊಲೀಸರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸಿದ್ದು, ಸಾರ್ವಜನಿಕರ ಸೇವೆಯಲ್ಲಿ ತೊಡಗಲು ಮತ್ತಷ್ಟು ಬಲ ನೀಡಿದಂತಾಗಿದೆ. ಈ ಸ್ವಾಗತ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಮಾಸ್ಕ್ ಧರಿಸಿದ್ದರಲ್ಲದೆ, ಸಾಮಾಜಿಕ ಅಂತರವನ್ನೂ ಕಾಪಾಡಿ ಆರೋಗ್ಯ ಶಿಸ್ತು ಕಾಪಾಡಿದ್ದು ಸಹ ಅನುಕರಣೀಯವಾಗಿತ್ತು.
Advertisement