ನಾಯಿಗಳ ಮೂಲಕ ಉಡ ಬೇಟೆ, ವೈರಲ್ ಆಯ್ತು ವಿಕೃತಿ, ಯುವಕ ಜೈಲು ಪಾಲು!

ಜನ ವಸತಿ ಪ್ರದೇಶದಿಂದ ದೂರ ಇರುವ ಹಾಗೂ ಬೆಟ್ಟ ಕಾಡುಗಳಲ್ಲಿ ಪೊಟರೆಗಳಲ್ಲಿ ವಾಸಿಸುವ ನಿರುಪದ್ರವ ಜೀವಿ ಸರಿಸೃಪ ಜಾತಿಯ ಉಡವನ್ನು ಹಿಡಿದು ಯುವಕನೊಬ್ಬ ವಿಕೃತಿ ಮೆರೆದ ಘಟನೆ ತಾಲ್ಲೂಕಿನ ಮಲ್ಲಾಪುರದಲ್ಲಿ ನಡೆದಿದೆ.
ಯುವಕನ ಬಂಧನ
ಯುವಕನ ಬಂಧನ

ಗಂಗಾವತಿ: ಜನ ವಸತಿ ಪ್ರದೇಶದಿಂದ ದೂರ ಇರುವ ಹಾಗೂ ಬೆಟ್ಟ ಕಾಡುಗಳಲ್ಲಿ ಪೊಟರೆಗಳಲ್ಲಿ ವಾಸಿಸುವ ನಿರುಪದ್ರವ ಜೀವಿ ಸರಿಸೃಪ ಜಾತಿಯ ಉಡವನ್ನು ಹಿಡಿದು ಯುವಕನೊಬ್ಬ ವಿಕೃತಿ ಮೆರೆದ ಘಟನೆ ತಾಲ್ಲೂಕಿನ ಮಲ್ಲಾಪುರದಲ್ಲಿ ನಡೆದಿದೆ.
ಘಟನೆಗೆ ಸಂಬಂಧಿಸಿದಂತೆ ಮಲ್ಲಾಪುರ ಗ್ರಾಮದ ತಾತಪ್ಪ ಎಂಬ 25 ವರ್ಷ ಯುವಕನನ್ನು ಇದೀಗ ಅರಣ್ಯ ಇಲಾಖೆಯ ಅಧಿಕಾರಿಗಳು ಬಲೆ ಬೀಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮಾಡಿದ ತಪ್ಪಿಗೆ ಇದೀಗ ಯುವಕ ಜೈಲು ಕಂಬಿ ಎಣಿಸುವಂತಾಗಿದೆ.

ಘಟನೆಯ ವಿವರ:
ಗ್ರಾಮದಲ್ಲಿ ಇತ್ತೀಚೆಗೆ ಉಡವನ್ನು ಬೇಟೆಯಾಡಿದ ಯುವಕ, ಅದನ್ನು ಜೀವಂತವಾಗಿ ನಾಯಿಗಳ ಬಾಯಿಗೆ ಕೊಟ್ಟು ಎಳೆದಾಡಿ ವಿಕೃತಿ ಮೆರೆದಿದ್ದಾನೆ. ಸಾಲದೆಂಬಂತೆ ಈ ಘಟನಾವಳಿಗಳನ್ನು ಕ್ಯಾಮರದಲ್ಲಿ ಸೆರೆ ಹಿಡಿದು ಅದರಿಂದ ಮನೋರಂಜನೆ ಪಡೆದುಕೊಂಡಿದ್ದಾನೆ.

ಅದೂ ಸಾಲದು ಎಂಬಂತೆ ಟಿಕ್ಟಾಕ್ ಮಾಡಿ ಸೋಷಿಯಲ್ ಮೀಡಿಯಾಕ್ಕೆ ಅಪ್ಲೋಡ್ ಮಾಡಿದ್ದಾನೆ. ಆ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದ್ದಂತೆಯೆ ಜಾಗೃತರಾದ ಅರಣ್ಯ ಇಲಾಖೆಯ ಅಧಿಕಾರಿಗಳು ಯುವಕನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ.

ಆರ್ಎಫ್ಒ ಶಿವರಾಜ ಮೇಟಿ ನೇತೃತ್ವದಲ್ಲಿ ಯುವಕನನ್ನು ಬಂಧಿಸಿದ, ಅರಣ್ಯ ಇಲಾಖೆಯ ಸಿಬ್ಬಂದಿ ವನ್ಯ ಜೀವಿಯನ್ನು ಬೇಟೆಯಾಡಿದ್ದಕ್ಕಾಗಿ ಇದೀಗ ಆತನ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅನ್ವಯ ದೂರು ದಾಖಲಿಸಿದ್ದಾರೆ.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್.ವೈ ಬೀಳಗಿ, ಉಪ ವಲಯ ಅರಣ್ಯಾಧಿಕಾರಿ ಶ್ರೀನಿವಾಸ ಮೂಲೇರ್ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಇದೀಗ ಆರೋಪಿಯನ್ನು ಜಿಲ್ಲಾ ಅರಣ್ಯಾಧಿಕಾರಿ ಮುಂದೆ ಹಾಜರು ಪಡಿಸಲಾಗಿದೆ. 

ವರದಿ: ಶ್ರೀನಿವಾಸ .ಎಂ.ಜೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com