ಮಂಡ್ಯ: ದುಷ್ಕರ್ಮಿಗಳ ತಂಡವೊಂದು ಮನೆಗೆ ನುಗ್ಗಿ ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಪ್ರಕರಣ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿ ಕರಿಕ್ಯಾತನಹಳ್ಳಿಯಲ್ಲಿ ನಡೆದಿದೆ.
ಗ್ರಾಮದ ಹನುಮೇಗೌಡರ ಪತ್ನಿ ಜಯಮ್ಮ (70) ಎಂಬುವರನ್ನು ಕೊಲೆ ಮಾಡಲಾಗಿದೆ. ಕೆ.ಆರ್ಪೇಟೆ-ನಾಗಮಂಗಲ ಮುಖ್ಯ ರಸ್ತೆಯ ಸರ್ಕಾರಿ ಶಾಲೆಯ ಎದುರಿನಲ್ಲಿರುವ ಮನೆಯಲ್ಲಿ ಹನುಮೇಗೌಡರ ಪತ್ನಿ ಜಯಮ್ಮ (70) ವಾಸವಿದ್ದರು, ಒಂಟಿಯಾಗಿದ್ದ ವಿಷಯವನ್ನು ತಿಳಿದಿದ್ದ ದುಷ್ಕರ್ಮಿಗಳು, ಸೋಮವಾರ ತಡರಾತ್ರಿ ಮನೆಯ ಮುಂಬಾಗಿಲು ಒಡೆದು ಒಳಗೆ ನುಗ್ಗಿ ವೃದ್ಧೆಯನ್ನು ಕೊಂದು ಮೈಮೇಲಿದ್ದ ಮಾಂಗಲ್ಯ ಸರ, ಓಲೆ, ಉಂಗುರ ಹಾಗೂ ಮಾಟಿ ಸೇರಿದಂತೆ ಸುಮಾರು 75 ಗ್ರಾಂಗಳಿಗೂ ಹೆಚ್ಚು ತೂಕದ ಆಭರಣವನ್ನು ಕಳವು ಮಾಡಿ ಪರಾರಿಯಾಗಿದ್ದಾರೆ.
ಪ್ರಕರಣದಿಂದ ಗ್ರಾಮಸ್ಥರು ಆತಂಕದಲ್ಲಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement