ಬೆಳಗಾವಿ: ಫೇಲ್ ಆಗುವ ಭಯದಿಂದ ಎಸ್ಎಸ್ಎಲ್ ಸಿ ವಿದ್ಯಾರ್ಥಿನಿ ಆತ್ಮಹತ್ಯೆ
ಬೆಳಗಾವಿ: ಕೊರೋನಾ ವೈರಸ್ ಭೀತಿಯ ನಡುವೆಯೇ ರಾಜ್ಯಾದ್ಯಂತ ಇಂದಿನಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭವಾಗಿದೆ. ಆದರೆ ಬೆಳಗಾವಿಯಲ್ಲಿ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುವ ಮೂಲಕ ಬದುಕಿಗೆ ವಿದಾಯ ಹೇಳಿದ್ದಾಳೆ.
ಶಹಾಪುರದ ಕಲ್ಮೇಶ್ವರ ನಗರದ ಸುಜಾತಾ ಢಗೆ(16) ತಮ್ಮ ನಿವಾಸದಲ್ಲಿ ಬುಧವಾರ ರಾತ್ರಿ ನೇಣಿಗೆ ಶರಣಾಗಿದ್ದಾಳೆ.
ಬೆಳಗಾವಿಯ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಜಾತಾ, ಪರೀಕ್ಷೆಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಈ ವಿದ್ಯಾರ್ಥಿನಿ ಪರೀಕ್ಷೆ ಹೆದರುತ್ತಿದ್ದಳು ಏಕೆಂದರೆ ಅವಳು ಪರೀಕ್ಷೆಗೆ ಸರಿಯಾಗಿ ಸಿದ್ಧತೆ ನಡೆಸಿರಲಿಲ್ಲ. ತಾನು ಈ ಹಿಂದೆ ಓದಿದ್ದು ನೆನಪಿಲ್ಲ ಎಂದು ಆಕೆ ತನ್ನ ಹೆತ್ತವರಿಗೆ ಹೇಳಿದ್ದಳು ಎನ್ನಲಾಗಿದೆ.
ಪರೀಕ್ಷೆಯಲ್ಲಿ ಫೇಲ್ ಆಗುವ ಭಯದಿಂದ ಮಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆಕೆಯ ಪೋಷಕರು ನಂಬಿದ್ದಾರೆ.
ಘಟನಾ ಸ್ಥಳಕ್ಕೆ ಶಹಾಪುರ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿದ್ದಾರೆ.