ಕೊರೋನಾ ನಿಯಂತ್ರಣಕ್ಕೆ ಬಿಗಿ ಕ್ರಮದ ಕುರಿತು ಇಂದು, ನಾಳೆ ಸಚಿವರು, ಶಾಸಕರ ಸಭೆ ಬಳಿಕ ತೀರ್ಮಾನ: ಯಡಿಯೂರಪ್ಪ

ಕೊರೋನಾ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಂದು ಮತ್ತು ನಾಳೆ ಎಲ್ಲಾ ಸಚಿವರು, ಎಲ್ಲಾ ಪಕ್ಷಗಳ ಶಾಸಕರು ಮತ್ತು ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಸಿಎಂ ಬಿಎಸ್ ಯಡಿಯೂರಪ್ಪ (ಎಎನ್ಐ ಚಿತ್ರ))
ಸಿಎಂ ಬಿಎಸ್ ಯಡಿಯೂರಪ್ಪ (ಎಎನ್ಐ ಚಿತ್ರ))

ಬೆಂಗಳೂರು: ಕೊರೋನಾ ನಿಯಂತ್ರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಂದು ಮತ್ತು ನಾಳೆ ಎಲ್ಲಾ ಸಚಿವರು, ಎಲ್ಲಾ ಪಕ್ಷಗಳ ಶಾಸಕರು ಮತ್ತು ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕೋವಿಡ್-19 ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಅದನ್ನು ತಡೆಯಲು ಎಲ್ಲಾ ರೀತಿಯ ಪ್ರಯತ್ನ ಮಾಡಲಾಗಿದೆ. ನಗರದ ಕೆಲವು ಪ್ರದೇಶಗಳನ್ನು ಸೀಲ್ ಡೌನ್ ಮಾಡಲಾಗಿದೆ. ಆದರೂ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ಎಲ್ಲಾ ಸಚಿವರು, ಅಧಿಕಾರಿಗಳ ಸಭೆ ಕರೆದು ಕೋವಿಡ್ ನಿಯಂತ್ರಣಕ್ಕೆ ಬಿಗಿ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ನಾಳೆ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ಎಲ್ಲಾ ಪಕ್ಷದ ಶಾಸಕರು, ಬೆಂಗಳೂರಿನ ಸಚಿವರ ಸಭೆಯನ್ನು ಕೃಷ್ಣಾದಲ್ಲಿ ಕರೆಯಲಾಗಿದ್ದು, ಅಲ್ಲಿ ಅವರೊಂದಿಗೂ ಸಮಾಲೋಚನೆ ಮಾಡಿ ಬಿಗಿ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು. ಕೊರೋನಾ ನಿಯಂತ್ರಣದ ವಿಷಯದಲ್ಲಿ ಬೆಂಗಳೂರು ಇಡೀ ದೇಶದಲ್ಲಿ ಮಾದರಿಯಾಗಿದೆ. ಬೇರೆ ದೇಶ, ರಾಜ್ಯಗಳ ಪ್ರಮುಖ ನಗರಗಳಿಗೆ ಹೋಲಿಸಿದರೆ ಇಲ್ಲಿ ಇನ್ನೂ ನಿಯಂತ್ರಣ ತಪ್ಪಿಲ್ಲ. ಆದರೂ ಹತ್ತಾರು ದಿನಗಳಲ್ಲಿ ಸೋಂಕು ಪ್ರಕರಣಗಳ ಸಂಖ್ಯೆ ಜಾಸ್ತಿ ಆಗುತ್ತಿದೆ. ಇಂದು ಮತ್ತು ನಾಳೆ ನಿರಂತರ ಸಮಾಲೋಚನೆ ಮಾಡಿ ಬಿಗಿ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ರಾಜ್ಯದಲ್ಲಿ ಲಾಕ್‌ ಡೌನ್ ಸಡಿಸಲಿಸಿ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ. ಆದರೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡದೆ ಓಡಾಡುತ್ತಿದ್ದಾರೆ. ಬೆಂಗಳೂರು ಮತ್ತೊಮ್ಮೆ ಸೀಲ್‌ ಡೌನ್ ಆಗಬಾರದು ಎಂದಿದ್ದರೆ ಜನರು ಸಹಕಾರ ನೀಡಬೇಕು. ಅಂತರ ಕಾಪಾಡದೆ ಬೇಕಾಬಿಟ್ಟಿ ಏಡಾಡುತ್ತಿರುವುದು ಸ್ಲಂ ಮತ್ತಿತರ ಕಡೆಗಳಲ್ಲಿ ಕಂಡುಬಂದಿದೆ. ಕೊರೋನಾ ತಡೆಗೆ ಜನತೆ ಸಹಕಾರ ನೀಡಬೇಕು. ವ್ಯಕ್ತಿಗತ ಅಂತರ ಕಾಪಾಡಿಕೊಳ್ಳುವ ಮೂಲಕ ಸರ್ಕಾರದ ನಿಯಮಗಳನ್ನು ಪಾಲಿಸಬೇಕು ಎಂದು ಮನವಿ ಮಾಡಿದರು.

SSLC ಪರೀಕ್ಷೆಗೂ ಲಾಕ್‍ಡೌನ್ ಗೂ ಸಂಬಂಧವಿಲ್ಲ
ಇದೇ ವೇಳೆ SSLC ಪರೀಕ್ಷೆಗೂ ಲಾಕ್‍ಡೌನ್ ಗೂ ಸಂಬಂಧವಿಲ್ಲ ಎಂದು ಹೇಳಿದ ಸಿಎಂ ಯಡಿಯೂರಪ್ಪ ಅವರು, ಬೆಂಗಳೂರು ನಗರ ಮತ್ತೆ ಲಾಕ್ಡೌನ್ ಆಗಬಾರದು ಎಂಬುದು ನಮ್ಮ ಆಶಯವಾಗಿದೆ. ಅದಕ್ಕಾಗಿ ಜನ ಸಹಕಾರ ಕೊಡಬೇಕು.‌ ಸುರಕ್ಷಿತ ಅಂತರ ಕಾಪಾಡಿಕೊಳ್ಳುವ ಮೂಲಕ ಎಚ್ಚರಿಕೆ ವಹಿಸಬೇಕು. ಬೆಂಗಳೂರು ಪೂರ್ಣ ಲಾಕ್‍ಡೌನ್ ಮಾಡಿಲ್ಲ, ಕೆಲ ಪ್ರದೇಶಗಳಿಗೆ ಲಾಕ್‍ಡೌನ್ ಮುಂದುವರಿಯುತ್ತದೆ. ಇದರಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಯಾವುದೇ ತೊಂದರೆಯಾಗಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com