ಯಾದಗಿರಿ: ಶಹಾಪುರದ ಬಾಪುಗೌಡ ನಗರ ಸಮೀಪದ ಹೊಳೆಯಿಂದ ಉಂಟಾಗಿರುವ ಪ್ರವಾಹದ ನೀರಿನಿಂದ ಆವೃತವಾಗಿರುವ ಮನೆಯೊಂದರಿಂದ ಕುಟುಂಬದ ಎಂಟು ಸದಸ್ಯರನ್ನು ಭಾನುವಾರ ರಕ್ಷಿಸಲಾಗಿದೆ.
ಬಾಪುಗೌಡ ನಗರದಲ್ಲಿ ವಿದ್ಯುತ್ ವೈಫಲ್ಯದ ಬಗ್ಗೆ ದೂರುಗಳು ಬಂದ ನಂತರ ವಿದ್ಯುತ್ ಮಾರ್ಗಗಳನ್ನು ಪರೀಕ್ಷಿಸಲು ತಂಡದೊಂದಿಗೆ ಸಾಗಿದ್ದಾಗ ಮನೆಯೊಂದರಿಂದ ಕುಟುಂಬ ಸದಸ್ಯರು ಸಹಾಯಕ್ಕಾಗಿ ಕೂಗುತ್ತಿರುವುದು ತಮಗೆ ಕೇಳಿ ಬಂದಿದೆ ಎಂದು ಶಹಾಪುರ ಗೆಸ್ಕಾಮ್ ನ ವಿಭಾಗ ಅಧಿಕಾರಿ(ಉಸ್ತುವಾರಿ) ಇಕ್ಬಾಲ್ ಲೋಹಾರಿ ಸೋಮವಾರ ಹೇಳಿದ್ದಾರೆ.
ಕತ್ತಲೆಯಾಗಿದ್ದರಿಂದ ಮತ್ತು ಭಾರೀ ಮಳೆಯಿಂದಾಗಿ ತಮಗೆ ಕೂಗಾಟ ಮಾತ್ರ ಕೇಳುತ್ತಿತ್ತು. ಮನೆಯ ಸುತ್ತಲೂ ನೀರು ಸುತ್ತುವರಿದಿದ್ದರಿಂದ ಕೂಗಾಟ ಎಲ್ಲಿಂದ ಬರುತ್ತಿದೆ ಎಂದು ತಿಳಿಯುವುದಕ್ಕೆ ಕಷ್ಟವಾಯಿತು ಎಂದು ಅವರು ಹೇಳಿದ್ದಾರೆ.
ಮನೆಯಲ್ಲಿ ಸಿಕ್ಕಿಬಿದ್ದ ಎಂಟು ಜನರನ್ನು ಪತ್ತೆಹಚ್ಚಿದೆ. ತಕ್ಷಣವೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳನ್ನು ಎಚ್ಚರಿಸಿದೆ. ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಸಿಕ್ಕಿಬಿದ್ದ ಎಲ್ಲ ಕುಟುಂಬ ಸದಸ್ಯರನ್ನು ರಕ್ಷಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಕ್ಷಿಸಲ್ಪಟ್ಟ ಎಲ್ಲ ಸದಸ್ಯರು ಸದ್ಯ ಸರ್ಕಾರಿ ವಿದ್ಯಾರ್ಥಿ ನಿಲಯದಲ್ಲಿ ಉಳಿದಿದ್ದಾರೆ.
ರಕ್ಷಿಸಲ್ಪಟ್ಟ ಎಲ್ಲರೂ ಸುರಕ್ಷಿತವಾಗಿದ್ದು ಆರೋಗ್ಯದಿಂದಿದ್ದಾರೆ. ಅವರಿಗೆ ವೈದ್ಯಕೀಯ ನೆರವು ಮತ್ತು ಆಹಾರವನ್ನು ನೀಡಲಾಗುತ್ತಿದೆ. ಪ್ರವಾಹ ಕಡಿಮೆಯಾಗುವವರೆಗೂ ಇವರೆಲ್ಲ ವಿದ್ಯಾರ್ಥಿನಿಲಯದಲ್ಲೇ ಉಳಿಯಲಿದ್ದಾರೆ ಎಂದು ಶಹಾಪುರ ತಹಶೀಲ್ದಾರ್ ಜಗನ್ನಾಥ ರೆಡ್ಡಿ ಹೇಳಿದ್ದಾರೆ.
Advertisement