ಬೆಂಗಳೂರು: ತಂದೆ, ಪತ್ನಿ ಹಾಗೂ ಪುತ್ರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಳೆದೊಂದು ವಾರದಿಂದ ಹೋಮ್ ಕ್ವಾರೆಂಟೈನ್ನಲ್ಲಿದ್ದ ವೈದ್ಯಕೀಯ ಸಚಿವ ಕೆ.ಸುಧಾಕರ್ ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಕೋವಿಡ್ ಸಂಬಂಧಿಸಿದ ಸಭೆಗೆ ವಿಧಾನಸೌಧದಲ್ಲಿ ಪಾಲ್ಗೊಳ್ಳುವ ಮುನ್ನ ಪತ್ನಿ, ಪುತ್ರಿಗೆ ಕೊರೋನಾ ಪಾಸಿಟಿವ್ ನಿಂದ ನಾನು ಕ್ವಾರಂಟೈನ್ನಲ್ಲಿದ್ದೆ. ಎರಡು ಬಾರಿಯ ಟೆಸ್ಟಿಂಗ್ ನಲ್ಲಿ ನನ್ನ ರಿಪೋರ್ಟ್ ನೆಗಟಿವ್ ಬಂತು. ಈಗ ಕ್ವಾರಂಟೈನ್ ಮುಗಿಸಿ ನಾನು ಕರ್ತವ್ಯಕ್ಕೆ ಹಾಜರಾಗುತ್ತಿದ್ದೇನೆ. ಎಲ್ಲರ ಆಶೀರ್ವಾದ, ಹಾರೈಕೆಯಿಂದ ನಾನು ಮತ್ತೆ ಬಂದಿದ್ದೇನೆ ಎಂದರು.
ಕಳೆದ ಎಂಟು ದಿನಗಳ ಹಿಂದೆ ಸಚಿವ ಕೆ. ಸುಧಾಕರ್ ಅವರ ಪತ್ನಿ, ಪುತ್ರಿ ಹಾಗೂ ತಂದೆಯನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ವೇಳೆ ಈ ಮೂವರಿಗೂ ಕೊರೋನಾ ಪಾಸಿಟಿವ್ ಎಂದು ವರದಿ ಬಂದಿತ್ತು. ಹೀಗಾಗಿ ಸುಧಾಕರ್ ಏಳು ದಿನಗಳ ಕಾಲ ಸದಾಶಿವನಗರದ ತಮ್ಮ ಮನೆಯಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದರು. ಮನೆಯಲ್ಲೇ ಉಳಿದಿದ್ದ ಸಚಿವ ಸುಧಾಕರ್ ವೀಡಿಯೋ ಕಾನ್ಫರೆನ್ಸ್ ಮೂಲಕ ನಿತ್ಯ ತನ್ನ ಇಲಾಖೆಯ ಕಾರ್ಯಗಳ ಬಗ್ಗೆ ಮೇಲುಸ್ತುವಾರಿ ನಡೆಸಿದ್ದರು. ಅಲ್ಲದೆ ಕೊರೋನಾ ತಡೆ ಕುರಿತು ಇಲಾಖೆಯ ಅಧಿಕಾರಿಗಳ ಜೊತೆ ಸಭೆ ನಡೆಸಿ, ಕೊರೋನಾ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡುತ್ತಿದ್ದರು.
Advertisement