ಬೆಂಗಳೂರು: ಇತ್ತೀಚೆಗಷ್ಟೇಅಮೂಲ್ಯಾ ಲಿಯೋನಾ ನಗರದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದ ಬೆನ್ನಲ್ಲೇ ಇಂದು ಶಿವಾಜಿನಗರದಲ್ಲಿ ಮತ್ತೆ ಫ್ರೀ ಕಾಶ್ಮೀರ ಬರಹ ಪತ್ತೆಯಾಗಿದೆ
ಶಿವಾಜಿನಗರದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಎನ್ಕ್ಲೇವ್ ಬಳಿ ಗೋಡೆ ಮೇಲೆ ಕಿಡಿಗೇಡಿಗಳು 'ಫ್ರೀ ಕಾಶ್ಮೀರ್' ಸಿಎಎ ವಿರೋಧಿ ಬರಹದ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಬರೆದು ಪರಾರಿಯಾಗಿದ್ದಾರೆ. ಗೋಡೆಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಬರೆಯಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರ್ವ ವಿಭಾಗ ಡಿಸಿಪಿ ಶರಣಪ್ಪ ಪ್ರತಿಕ್ರಿಯಿಸಿ, ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಕ್ಷೇಪಾರ್ಹ ಬರಹ ಬರೆದಿರುವುದು ಗಮನಕ್ಕೆ ಬಂದಿದ್ದು, ಈ ಕುರಿತು ಹಲಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕೊಂಡು ತನಿಖೆ ನಡೆಸುತ್ತಿದ್ದೇವೆ ಎಂದರು.
ಸದ್ಯ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪಡೆಯಲಾಗಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ. ಆಕ್ಷೇಪಾರ್ಹ ಬರಹಗಳನ್ನು ಬರೆದವರನ್ನು ಪತ್ತೆ ಹಚ್ಚಲು ಮುಂದಾಗಿದ್ದೇವೆ ಎಂದು ಹೇಳಿದರು.
ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಿಎಎ ವಿರೋಧಿ ಸಮಾವೇಶದಲ್ಲಿ ಅಮೂಲ್ಯ ಲಿಯೋನಾ ಎಂಬ ವಿದ್ಯಾರ್ಥಿನಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದಳು. ಬಳಿಕ ಆಕೆಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇದಾದ ಬಳಿಕ ಟೌನ್ಹಾಲ್ ಬಳಿ ಆರ್ದ್ರಾ ಎಂಬ ಯುವತಿ 'ಫ್ರೀ ಕಾಶ್ಮೀರ್' ಭಿತ್ತಿ ಪತ್ರ ಪ್ರದರ್ಶಿಸಿದ್ದಳು. ನಂತರ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ನೀಡಿದ್ದರು.
Advertisement