ವಿಜಯಪುರ: ಮಾರುತಿ ಓಮ್ನಿ ವ್ಯಾನ್ ಗೆ ಖಾಸಗಿ ಬಸ್ ಹಿಂಬಂದಿಯಿಂದ ಡಿಕ್ಕಿಹೊಡೆದ ಪರಿಣಾಮ ವ್ಯಾನ್ ನಲ್ಲಿದ್ದ ಅಜ್ಜಿ, ಮೊಮ್ಮಗಳು ಮೃತಪಟ್ಟು,ಇತರ ನಾಲ್ವರು ಗಾಯಗೊಂಡಿರುವ ದುರ್ಘಟನೆ ಜಿಲ್ಲೆಯ ಕೊಲ್ಹಾರ ಬಳಿ ಜರುಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ
ಕೊಲ್ಹಾರ ಪಟ್ಟಣದ ಯುಕೆಪಿ ವೃತ್ತದಲ್ಲಿ ನಡೆಯುತ್ತಿರುವ ಅಂಡರ್ ಪಾಸ್ ಕಾಮಗಾರಿಗಾಗಿ ಬೃಹತ್ ಗುಂಡಿ ತೋಡಿದ್ದು, ತಡರಾತ್ರಿ ಮುಂದೆ ಹೋಗುತ್ತಿದ್ದ ಓಮ್ನಿ ವ್ಯಾನ್ ಗೆ ಹಿಂದಿನಿಂದ ಬಂದ ಖಾಸಗಿ ಬಸ್ ಢಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಮೃತಪಟ್ಟವರನ್ನು ಮಹಿರಾ ಬಾನು(೩) ಹಾಗೂ ಆಕೆಯ ಅಜ್ಜಿ ಚಾಂದ್ ಬೀ ಅಂಗಡಿ(೪೫) ಎಂದು ಗುರುತಿಸಲಾಗಿದೆ.
ಬಸ್ ಡಿಕ್ಕಿ ಹೊಡೆದ ತೀವ್ರತೆಗೆ ಓಮ್ನಿವ್ಯಾನ್ ಪಕ್ಕದ ಗುಂಡಿಗೆ ಉರುಳಿಬಿದ್ದು, ಮಹಿರಾ ಹಾಗೂ ಚಾಂದ್ ಬೀ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇತರ ನಾಲ್ವರೂ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಗಿದೆ
ಘಟನೆ ಬಳಿಕ ಚಾಲಕ, ಕ್ಲೀನರ್ ಸ್ಥಳದಲ್ಲೇ ಬಸ್ ಬಿಟ್ಟು ಪರಾರಿಯಾಗಿದ್ದು, ಪೊಲೀಸರು ಬಸ್ ವಶಕ್ಕೆ ಪಡೆದಿದ್ದಾರೆ.
ಅಂಡರ್ ಪಾಸ್ ಅವೈಜ್ಞಾನಿಕ ಕಾಮಗಾರಿಯೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರುತ್ತಿದ್ದಾರೆ
ಸ್ಥಳಕ್ಕೆ ಧಾವಿಸಿರುವ ಸ್ಥಳೀಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Advertisement