ನಿರ್ಭಿತ, ಧೀಮಂತ ಪತ್ರಕರ್ತ 'ಪಾಪು ಇನ್ನು ನೆನಪು ಮಾತ್ರ! ಜೀವನ, ಸಾಧನೆ ಕುರಿತ ವಿಶೇಷ ವರದಿ

ಕನ್ನಡ ನಾಡಿನ ಸಾಕ್ಷಿಪ್ರಜ್ಞೆ, ಶ್ರೀಮಂತ ಸಂಸ್ಕೃತಿಯ ರಕ್ಷಕರಾಗಿದ್ದ ಡಾ. ಪಾಟೀಲ ಪುಟ್ಟಪ್ಪ ಅವರು ಅಪ್ರತಿಮ ಹೋರಾಟಗಾರರು, ನಿರ್ಭಿತ ಹಾಗೂ ಧೀಮಂತ ಪತ್ರಕರ್ತರು ಆಗಿದ್ದರು. ಸೃಜನ ಶೀಲ ಸಾಹಿತಿಯಾಗಿಯೂ ಅವರ ಸಾಹಿತ್ಯದ ಮೂಸೆಯಿಂದ ಅನೇಕ ಅಪೂರ್ವ ಕೃತಿಗಳು ಮೂಡಿಬಂದಿವೆ. 
ಡಾ. ಪಾಟೀಲ ಪುಟ್ಟಪ್ಪ
ಡಾ. ಪಾಟೀಲ ಪುಟ್ಟಪ್ಪ

ಹುಬ್ಬಳ್ಳಿ: ಕನ್ನಡ ನಾಡಿನ ಸಾಕ್ಷಿಪ್ರಜ್ಞೆ, ಶ್ರೀಮಂತ ಸಂಸ್ಕೃತಿಯ ರಕ್ಷಕರಾಗಿದ್ದ ಡಾ. ಪಾಟೀಲ ಪುಟ್ಟಪ್ಪ ಅವರು ಅಪ್ರತಿಮ ಹೋರಾಟಗಾರರು, ನಿರ್ಭಿತ ಹಾಗೂ ಧೀಮಂತ ಪತ್ರಕರ್ತರು ಆಗಿದ್ದರು. ಸೃಜನ ಶೀಲ ಸಾಹಿತಿಯಾಗಿಯೂ ಅವರ ಸಾಹಿತ್ಯದ ಮೂಸೆಯಿಂದ ಅನೇಕ ಅಪೂರ್ವ ಕೃತಿಗಳು ಮೂಡಿಬಂದಿವೆ. 

 1921, ಜನವರಿ 14 ರಲ್ಲಿ  ಹಾವೇರಿ ತಾಲೂಕಿನ ಕುರಬಗೊಂಡ ಹಳ್ಳಿಯಲ್ಲಿ ಜನಿಸಿದ ಡಾ. ಪಾಟೀಲ ಪುಟ್ಟಪ್ಪ ಅವರ ತಂದೆ ಸಿದ್ಧಲಿಂಗಪ್ಪ, ತಾಯಿ ಮಲ್ಲಮ್ಮ, ಹುಟ್ಟಿದ ಊರು ಹಾಗೂ ಹಾವೇರಿಯಲ್ಲಿ  ಪ್ರಾಥಮಿಕ ವಿಧ್ಯಾಭ್ಯಾಸ ಪೂರೈಸಿದ ಅವರು, ಲಿಂಗರಾಜ ಕಾಲೇಜ್ ಸೇರಿ ಕಾನೂನು ಪದವಿ ಗಳಿಸಿದರು. ನಂತರ ಬಿಜಾಪುರದಲ್ಲಿ ವಕೀಲಿ ವೃತ್ತಿ ಆರಂಭಿಸಿದರು.

ಕಕ್ಷಿದಾರರಿಲ್ಲದೆ ಸಂಪಾದನೆಗೆ ಖೋತಾ , ಊಟಕ್ಕೂ ತಾತ್ವರ ಉಂಟಾಗಿ ಉದ್ಯೋಗಕ್ಕಾಗಿ ಮುಂಬೈಗೆ ಪಯಣಿಸುತ್ತಾರೆ. ನಂತರ ಪತ್ರಿಕೋದ್ಯಮದಲ್ಲಿ ಆಸಕ್ತಿ ಬೆಳೆಸಿಕೊಂಡು ಕ್ಯಾಲಿಫೋರ್ನಿಯಾಗೆ ತೆರಳಿ ಪತ್ರಿಕೋದ್ಯಮದಲ್ಲಿ ಎಂ.ಎಸ್. ಸಿ ಗಳಿಸಿ ಹಿಂದಿರುಗಿ ಬಂದು ಪತ್ರಿಕಾ ರಂಗ ಪ್ರವೇಶಿಸುತ್ತಾರೆ.

1947ರಲ್ಲಿ ವಿಶಾಲ ಕರ್ನಾಟಕ, 1952ರಲ್ಲಿ ನವಯುಗ, 1954ರಲ್ಲಿ ಪ್ರಪಂಚ ಸಾಪ್ತಾಹಿಕ, 1956ರಲ್ಲಿ ಸಂಗಮ ಮಾಸಿಕ, 1959ರಲ್ಲಿ ವಿಶ್ವವಾಣಿ ದೈನಿಕ, 1961ರಲ್ಲಿ ಮನೋರಮ ಸಿನಿಮಾ ಪಾಕ್ಷಿಕ, 1964ರಲ್ಲಿ ಸ್ತ್ರಿ ಮಾಸಿಕ ಮುಂತಾದ ಹಲವಾರು ಪತ್ರಿಕೆಗಳ ಸಂಪಾದಕತ್ವ ವಹಿಸಿಕೊಳ್ಳುತ್ತಾರೆ.

ನಂತರ ಕನ್ನಡ ಕಾವಲು ಸಮಿತಿ ಅಧ್ಯಕ್ಷರಾಗಿ ನಾಡಿನಾದ್ಯಂತ ಕೈಗೊಂಡ ಕನ್ನಡ ಭಾಷಾ ಜಾಗೃತಿ ಅಭಿಯಾನ ಎಲ್ಲರ ಮನಸೊರೆಗೊಳ್ಳುತ್ತದೆ. ಧಾರವಾಡದ ವಿದ್ಯಾವರ್ಧಕ ಸಂಘವನ್ನು ವಿಸ್ತಾರವಾಗಿ ಬೆಳೆಸುವಲ್ಲಿ ಪುಟ್ಟಪ್ಪ ಅವರ ಪಾತ್ರ ಗಣನೀಯವಾಗಿದೆ.

 ಸಾವಿನ ಮೇಜುವಾನಿ, ಗವಾಕ್ಷ ತೆರೆಯಿತು, ಶಿಲಾಬಾಲಿಕೆ ನುಡಿಗಳು ಕಥಾಸಂಕಲನ,   ಸರ್ ಸಿದ್ಧಪ್ಪ ಕಂಬಳಿ, ಹೊಸಮನಿ ಸಿದ್ದಪ್ಪ ನವರು ಜೀವನ ಚರಿತ್ರೆ, ನನ್ನೂರು ಈ ನಾಡು, ಹೊಸದನ್ನ ಕಟ್ಟೋಣ, ಬದುಕುವ ಮಾತು ಪ್ರಬಂಧ ಸಂಕಲನಗಳನ್ನು ಅವರು ರಚಿಸಿದ್ದಾರೆ. 

ಬೆಳಗಾವಿಯಲ್ಲಿ ೨೦೦೩ರಲ್ಲಿ ಜರುಗಿದ 70ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಡಾ. ಪಾಟೀಲ ಪುಟ್ಟಪ್ಪ ಅವರಿಗೆ ಸಂದ  ಪ್ರಶಸ್ತಿ ಪುರಸ್ಕಾರಗಳಿಗೆ ಲೆಕ್ಕವಿಲ್ಲ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಟಿ.ಎಸ್.ಆರ್. ಪತ್ರಿಕಾ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಿ.ಲಿಟ್. ಪದವಿ. ಹಂಪಿ ವಿಶ್ವವಿದ್ಯಾಲಯದ ‘ನಾಡೋಜ’ ಪುರಸ್ಕಾರ,  ಕನ್ನಡ ಸಾಹಿತ್ಯ ಪರಿಷತ್ತಿನ ‘ನೃಪತುಂಗ ಸಾಹಿತ್ಯ’ ಪ್ರಶಸ್ತಿ – ಮುಂತಾದವು ಅವರ ಮುಡಿಗೇರಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com