2011ರಲ್ಲಿ ನೇಮಕಗೊಂಡ 362 ಗೆಜೆಟೆಡ್ ಪ್ರೊಬೆಷನರಿ ಅಭ್ಯರ್ಥಿಗಳ ಭವಿಷ್ಯ ಸಂಪುಟದಲ್ಲಿ ತೀರ್ಮಾನ- ಮುಖ್ಯಮಂತ್ರಿ

ರಾಜ್ಯ ಲೋಕಸೇವಾ ಆಯೋಗದಿಂದ 2011 ರಲ್ಲಿ ನೇಮಕಗೊಂಡ 362 ಗೆಜೆಟೆಡ್ ಪ್ರೊಬೆಷನರಿ ಅಭ್ಯರ್ಥಿಗಳ ಭವಿಷ್ಯ ಕುರಿತಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಲೋಕಸೇವಾ ಆಯೋಗದಿಂದ 2011 ರಲ್ಲಿ ನೇಮಕಗೊಂಡ 362 ಗೆಜೆಟೆಡ್ ಪ್ರೊಬೆಷನರಿ ಅಭ್ಯರ್ಥಿಗಳ ಭವಿಷ್ಯ ಕುರಿತಂತೆ ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಭರವಸೆ ನೀಡಿದ್ದಾರೆ

ವಿಧಾನಸಭೆಯಲ್ಲಿಂದು ನಿಯಮ 69 ರಡಿ ಕಾಂಗ್ರೆಸ್ ನ ಹೆಚ್.ಕೆ.ಪಾಟೀಲ್, ಜೆಡಿಎಸ್ ನ ಹೆಚ್.ಡಿ.ರೇವಣ್ಣ ಸೇರಿದಂತೆ ಹಲವು ಶಾಸಕರು ಮಾಡಿದ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ಈ ಕುರಿತು ಧಿಡೀರನೆ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಕರ್ನಾಟಕ ನ್ಯಾಯ ಮಂಡಳಿ, ಹೈಕೋರ್ಟ್ ಹಾಗೂ ಸರ್ವೋಚ್ಚ ನ್ಯಾಯಾಲಯಗಳಲ್ಲಿ ಪ್ರಕರಣ ಇರುವುದರಿಂದ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿಸಿದರು.

ಇದಕ್ಕೂ ಮುನ್ನ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, 362 ಅಭ್ಯರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆದೇಶ ಹೊರಡಿಸಬೇಕೇ? ಸುಗ್ರೀವಾಜ್ಞೆಯ ಮೂಲಕ ಅವಕಾಶ ಕಲ್ಪಿಸಬೇಕೇ? ಅಥವಾ ನ್ಯಾಯಾಲಯದ ಮುಂದೆ ಅರ್ಜಿ ಸಲ್ಲಿಸಿ ಹಿಂದಿನ ಸರ್ಕಾರ ನೇಮಕಾತಿಗೆ ಆಕ್ಷೇಪ ವ್ಯಕ್ತಪಡಿಸದೆ ಇರುವುದನ್ನು ಪರಿಗಣಿಸಬೇಕೇ? ಎಂಬುದನ್ನು ಪರಾಮರ್ಶಿಸಲಾಗುವುದು ಎಂದು ಹೇಳಿದರು.

ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು, ಸದಸ್ಯರ ಮೇಲೆ ಈ ನೇಮಕಾತಿ ವಿಷಯದಲ್ಲಿ ಯಾವ ದೂರುಗಳು ಅಥವಾ ಪ್ರಕರಣ ಕೂಡಾ ದಾಖಲಾಗಿಲ್ಲ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಲಾಗುವುದು. 362 ಅಭ್ಯರ್ಥಿಗಳ ಭವಿಷ್ಯ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ನುಡಿದರು.

ಇದಕ್ಕೂ ಮುನ್ನ ಸದನದಲ್ಲಿ ನಡೆದ ಚರ್ಚೆಯಲ್ಲಿ ಹೆಚ್.ಕೆ.ಪಾಟೀಲ್, ಹೆಚ್.ಡಿ.ರೇವಣ್ಣ ಸೇರಿದಂತೆ ಹಲವರು ಪಾಲ್ಗೊಂಡು ಮಾತನಾಡಿ, 2011 ರಲ್ಲಿ 362 ಮಂದಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳಿಗೆ ನೇಮಕಾತಿ ಮಾಡಲಾಗಿತ್ತು. ಆದರೆ ಅದನ್ನು ನಂತರ ಬಂದ ಸರ್ಕಾರ ರದ್ದುಗೊಳಿಸಿತ್ತು. ಈ ತೀರ್ಮಾನದ ವಿರುದ್ಧ ಅಭ್ಯರ್ಥಿಗಳು ನ್ಯಾಯಾಲಯಕ್ಕೆ ಹೋದರು. ಆದರೆ ಅವರ ಭವಿಷ್ಯ ಇನ್ನೂ ಅತಂತ್ರವಾಗಿದೆ. ಸರ್ಕಾರ ತಕ್ಷಣವೇ ಅವರ ವಿಷಯದಲ್ಲಿ ಸೂಕ್ತ ತೀರ್ಮಾನಕ್ಕೆ ಬರಬೇಕು. ಅವರ ಭವಿಷ್ಯ ಕಾಪಾಡಬೇಕು ಎಂದು ಮನವಿ ಮಾಡಿಕೊಂಡರು.

ಯಾವುದೋ ಪ್ರತಿಷ್ಠೆಗಳ ಹಿನ್ನೆಲೆಯಲ್ಲಿ ಈ ಅಭ್ಯರ್ಥಿಗಳ ಜೀವನ ಹಾಳಾಗಬಾರದು. ಆದ್ದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿ ಎಂದು ಪಕ್ಷ ಭೇಧ ಮರೆತು ಶಾಸಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com