ಬೆಂಗಳೂರು: ಆರ್ಥಿಕ ಸಂಕಷ್ಟದಿಂದ ಬೇಸತ್ತು ಹೋಟೆಲ್ ಉದ್ಯಮಿ ಹಾಗೂ ವರನಟ ಡಾ.ರಾಜ್ ಕುಮಾರ್ ಕುಟುಂಬದ ಆಪ್ತ ವಿ.ಕೆ.ಮೋಹನ್ ಅಲಿಯಾಸ್ ಕಪಾಲಿ ಮೋಹನ್ ಅವರು ಸೆಲ್ಫೀ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದುಬಂದಿದೆ.
ಪೀಣ್ಯದ ಹತ್ತಿರದ ಬಸವೇಶ್ವರ ಕೆಎಸ್ಆರ್'ಟಿಸಿ ಬಸ್ ನಿಲ್ದಾಣದಲ್ಲಿರುವ ತಮ್ಮ ಒಡೆತನದ ಸುಪ್ರೀಂ ಹೋಟೆಲ್ ನಲ್ಲಿ ಸ್ನೇಹಿತರ ಜೊತೆ ಮಾತುಕತೆ ನಡೆಸಿದ ಬಳಿಕ ಮೋಹನ್, ಕೊಠಡಿಗೆ ತೆರಳಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬೆಳಿಗ್ಗೆ ಅವರ ಮೊಬೈಲ್'ಕೆ ಮಾಡಿದರೂ ಸ್ವೀಕರಿಸದೆ ಹೋಗಾದ ಹೋಟೆಲ್ ಸಿಬ್ಬಂದಿ ಅವರ ಕೊಠಡಿಗೆ ತೆರಳಿದ್ದಾರೆ. ಈ ವೇಳೆ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸೆಲ್ಫೀ ವಿಡಿಯೋ ಮಾಡಿಟ್ಟು ಮೋಹನ್ ಅವರು ನೇಣಿಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಮೋಹನ್ ಅವರ ಮೊಬೈಲ್ ಪತ್ತೆಯಾಗಿದ್ದು, ಆತ್ಮಹತ್ಯೆಗೂ ಮುನ್ನ ಸೆಲ್ಫೀ ವಿಡಿಯೋ ಮಾಡಿರುವುದು ಕಂಡುಬಂದಿದೆ.
ವಿಡಿಯೋದಲ್ಲಿ ನಮಸ್ಕಾರ. ನಾನು ವಿ.ಕೆ.ಮೋಹನ್ ಮಾಡುತ್ತಿದ್ದೇನೆ. ನಾನು ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣದಲ್ಲಿ ಸಿಂಗಲ್ ಬಿಡ್ ಟೆಂಡರ್ ಕೂಗಿದ್ದೇನೆ. ಇಲ್ಲಿಯವರೆಗೆ ಬಸ್ ಬಿಟ್ಟಿಲ್ಲ. 7 ವರ್ಷಗಳಿಂದ ಸಂಕಷ್ಟಪಟ್ಟಿದ್ದೇನೆ. ಸಿಎಂ ಸಾಹೇಬ್ರಲ್ಲಿ ಬೇಡಿಕೊಳ್ಳುತ್ತಿದ್ದೇನೆ. ಇದಕ್ಕಾಗಿ ಮನೆ ಮಠ ಮಾರಿದ್ದೇನೆ. ಸವದಿ ಸಾಹೇಬ್ರಲ್ಲೂ ಕೇಳಿಕೊಳುತ್ತಿದ್ದೇನೆ. ಬೆಂಗಳೂರಿನಲ್ಲಿ ನನಗೆ ಬದುಕೋದಕ್ಕೆ ದಾರಿ ಇಲ್ಲದಂತಾಗಿದೆ. ಕೇವಲ ಬಸ್ ಸ್ಟಾಂಡ್ ನಿಂದಲೋ ಕೋಟ್ಯಾಂತರ ರುಪಾಯಿ ಕಳೆದುಕೊಂಡಿದ್ದೇನೆ. 7 ತಿಂಗಳಿಂದ ಬ್ಯಾಂಕ್ ಸಾಲ ನಿಲ್ಲಿಸಿದ್ದೇನೆ. ನನ್ನ ಬಾಡಿಗೆ ಮನ್ನಾ ಮಾಡಬೇಕು ಎಂದು ಬೇಡಿಕೊಳ್ಳುತ್ತಿದ್ದೇನೆ. ದಯವಿಟ್ಟು ಸಹಕರಿಸಿ ಎಂದು ಹೇಳಿದ್ದಾರೆ.
ಅಕ್ರಮ ಹಣಕಾಸು ವ್ಯವಹಾರದ ಆರೋಪದ ಮೇಲೆ ಎರಡು ವರ್ಷಗಳ ಹಿಂದಷ್ಟೇ ಮೋಹನ್ ಅವರ ಮನೆ, ಕಚೇರಿ ಮೇಲೆ ಸಿಸಿಬಿ ಪೊಲೀಸರು ಹಾಗೂ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದರು. ಈ ವೇಳೆ ರೂ.9.33 ಲಕ್ಷ ನಗದು ಹಾಗೂ ಇತೆರ ಆಸ್ತಿಪಾಸ್ತಿಗಳಿಗೆ ಮುಟ್ಟುಗೋಲು ಹಾಕಿದ್ದರು. ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದರು.
ಬಸವೇಶ್ವರ ಬಸ್ ನಿಲ್ದಾಣದ ವಾಣಿಜ್ಯ ಸಂಕೀರ್ಣವನ್ನು ಸಂಪೂರ್ಣವಾಗಿ ಗುತ್ತಿಗೆ ಪಡೆದಿದ್ದ ಮೋಹನ್, ಬಸ್ ಸೇವೆ ಆರಂಭವಾಗದ ಕಾರಣ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದರು ಎಂದು ಹೇಳಲಾಗುತ್ತಿದೆ.
Advertisement