ಬಾಗಲಕೋಟೆ: ಕೊರೊನಾ ಶಂಕಿತರಿಬ್ಬರು ಮನೆಯಲ್ಲಿಯೇ ಉಳಿದುಕೊಳ್ಳದೇ ನಿಯಮ ಉಲ್ಲಂಘಿಸಿದ ಹೊರಗಡೆ ತಿರುಗಾಡುತ್ತಿದ್ದ ವೇಳೆ ಅವರನ್ನು ವಶಕ್ಕೆ ಪಡೆದ ಪೊಲೀಸರು ಒತ್ತಾಯಪೂರ್ವಕವಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ನಿಯಮ ಉಲ್ಲಂಘಿಸಿ ತಿರುಗಾಡುತ್ತಿದ್ದ ಶಂಕಿತರಿಬ್ಬರ ವಿರದ್ದ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಶಂಕಿತರಾರೂ ಮನೆ ಬಿಟ್ಟು ತಿರುಗಾಡಬಾರದು,ಒಂದೊಮ್ಮೆ ಹೊರಗೆ ಬಂದಲ್ಲಿ ಅವರ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಎಸ್ಪಿ ಲೋಕೇಶ ಜಗಲಾಸರ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ವಿರುದ್ಧ ಸಮರ ಸಾರಿರುವ ರಾಜ್ಯ ಸರ್ಕಾರ ಕರ್ನಾಟಕ ಲಾಕ್ಡೌನ್ ಘೋಷಣೆ ಮಾಡಿದ್ದರೂ ಜನ ಮಾತ್ರ ತಿರುಗಾಟ ಕಡಿಮೆ ಮಾಡುತ್ತಿಲ್ಲ. ತರಕಾರಿ ಮಾರಾಟಗಾರರು ಹಾಗೂ ಸಾರ್ವಜನಿಕರು ಅನಗತ್ಯವಾಗಿ ಬಂದೋಸ್ತ್ ವ್ಯವಸ್ಥೆಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದಾರೆ. ಪೊಲೀಸರು ಎಷ್ಟೆ ಎಚ್ಚರಿಕೆ ನೀಡುತ್ತಿದ್ದರೂ ಕ್ಯಾರೆ ಎನ್ನದೇ ಜನ ಮೋಟರ್ ಸೈಕಲ್, ಕಾರಗಳಲ್ಲಿ ಓಡಾಡುತ್ತಿದ್ದಾರೆ. ಗುಂಪುಗುಂಪಾಗಿ ಸೇರುತ್ತಿದ್ದಾರೆ. ಅಟೋ ಚಾಲಕರೂ ಅಲ್ಲಲ್ಲಿ ಅಟೋಗಳನ್ನು ಓಡಾಡಿಸುತ್ತಿದ್ದು, ಪೊಲೀಸರೊಂದಿಗೆ ತಕರಾರು ಮಾಡುತ್ತಿದ್ದಾರೆ.
ಏತನ್ಮಧ್ಯೆ ಎಸ್ಪಿ ಜಗಲಾಸರ್ ಕಟ್ಟೆಚ್ಚರ ನೀಡಿದ್ದು, ಅನಗತ್ಯ ಓಡಾಟ ಕಂಡು ಬಂದಲ್ಲಿ, ಅಂತವರ ವಿರುದ್ಧ ನಿಯಮ ಉಲ್ಲಂಘನೆ ಪ್ರಕರಣ ದಾಖಲಿಸುವುದಾಗಿ ತಿಳಿಸಿದ್ದಾರೆ.
Advertisement