ಗಂಗಾವತಿ: ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುಳ್ಳು ಸುದ್ದಿಯನ್ನು ಕೊಪ್ಪಳ ಜಿಲ್ಲಾಧಿಕಾರಿಗೆ ರವಾನಿಸಿದ ಹಿನ್ನೆಲೆ ತಾಲ್ಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಯುವಕನೊಬ್ಬನ ಮೇಲೆ ಇದೀಗ ಎಫ್ ಐ ಆರ್ ದಾಖಲಾಗಿದೆ.
ಗ್ರಾಮದ ಯುವಕ ಪ್ರಭುರಾಜ್ ಹುಳ್ಳಿ ಎಂಬುವವರ ಮೇಲೆ ಗಂಗಾವತಿ ಗ್ರಾಮೀಣಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯು ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ.
ಹಜ್ ಯಾತ್ರೆ ಮುಗಿಸಿಕೊಂಡು ಬಂದಿರುವ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು ಮಸೀದಿಯಲ್ಲಿ ತಂಗಿದ್ದಾರೆ. ಇದರಿಂದ ಸಾಂಕ್ರಾಮಿಕವಾಗಿ ರೋಗ ಹರಡುವ ಭೀತಿ ಎದುರಾಗಿದೆ ಎಂದು ಯುವಕ, ಜಿಲ್ಲಾಧಿಕಾರಿಯ ಮೊಬೈಲ್ ಗೆ ಸಂದೇಶ ರವಾನಿಸಿದ್ದ. ಈ ಬಗ್ಗೆ ತನಿಖೆ ನಡೆಸಿದಾಗ ಮಾಹಿತಿ ಸುಳ್ಳು ಎಂದು ಗೊತ್ತಾಗಿದೆ. ಈ ಹಿನ್ನೆಲೆ ಮರಳಿ ಕಂದಾಯ ನಿರೀಕ್ಷಕ ಹನುಮಂತಪ್ಪ ಗ್ರಾಮೀಣ ಠಾಣೆ ದೂರು ದಾಖಲಿಸಿದ್ದಾರೆ.
ವರದಿ: ಶ್ರೀನಿವಾಸ್ .ಎಂ.ಜೆ
Advertisement