ಹೊಸಪೇಟೆ: ಪಡಿತರ ನೀಡದೆ ವಂಚಿಸಿದ್ದ ನ್ಯಾಯಬೆಲೆ ಅಂಗಡಿ ಮಾಲೀಕನನ್ನು ಪೊಲೀಸರು ಬಂಧಿಸಿದ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಹೊಸಪೇಟೆಯ ಹೊರಕೇರಿ, ಚಿತ್ತವಾಡಗಿಯ ಮೇರಿ ಎಂಬುವವರಿಗೆ ಏಪ್ರಿಲ್ ತಿಂಗಳಲ್ಲಿ ಪಡಿತರ ನೀಡದೆ ನ್ಯಾಯ ಬೆಲೆ ಅಂಗಡಿ ಕ್ರಮ ಸಂ.47ರ ಮಾಲೀಕ ಕೆ.ಪಿ.ಲಿಂಗರಾಜು ವಂಚಿಸಿದ್ದರು.
ಹೊಸಪೇಟೆ ಆಕಾಶವಾಣಿ ಬಡಾವಣೆಯ ಕೆ,ಹುಲಿಗೆಪ್ಪ ಎಂಬುವವರ ಮೊಬೈಲ್ ಬಳಸಿಕೊಂಡು ಮೇರಿ ಅವರ ಅಂತ್ಯೋದಯ ಅನ್ನ ಪಡಿತರ ಚೀಟಿಯ ಓಟಿಪಿ ಪಡೆದು ಕಳೆದ ಏಪ್ರಿಲ್ 20ರಂದು 70 ಕೆಜಿ ಅಕ್ಕಿ ಪಡೆದುಕೊಂಡಿರುವುದು ತನಿಖೆಯಿಂದ ಬಯಲಾಗಿತ್ತು.
ಪ್ರಕರಣ ದಾಖಲಿಸಿಕೊಂಡ ಹೊಸಪೇಟೆ ನಗರ ಪೊಲೀಸರು ಆರೋಪಿ ಲಿಂಗರಾಜುವನ್ನು ಬಂಧಿಸಿ ನ್ಯಾಯಬೆಲೆ ಅಂಗಡಿಯನ್ನು ವಶಕ್ಕೆ ಪಡೆದು ಅಲ್ಲಿನ ಪಡಿತರದಾರರನ್ನು ಬೇರೆ ಅಂಗಡಿಗೆ ವರ್ಗಾಯಿಸಲಾಗಿದೆ.
ನ್ಯಾಯಬೆಲೆ ಅಂಗಡಿ ಮಾಲೀಕ ಕೆ.ಪಿ.ಲಿಂಗರಾಜ್ ಮತ್ತು ಮೊಬೈಲ್ ಮಾಲೀಕ ಕೆ.ಹುಲಿಗೆಪ್ಪ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ ಪ್ರಕಾರ ಹೊಸಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Advertisement