ಲಾಕ್ ಡೌನ್ ಜಾರಿಯಾದ ಬಳಿಕ ರೈತರ ಸಂಕಷ್ಟಕ್ಕೆ ಮಿಡಿದ ಮೊದಲ ರಾಜ್ಯ ಕರ್ನಾಟಕ!

ಲಾಕ್ ಡೌನ್ ಜಾರಿಯಾದ ಬಳಿಕ ರೈತರ ಉತ್ಪನ್ನ ನಷ್ಟವಾಗದಂತೆ ಕೂಡಲೇ ಆಹಾರ ಸಂಸ್ಕರಣಾ ಘಟಕಗಳನ್ನು ತೆರೆಯುವ ಮೂಲಕ ಅವರ ಸಂಕಷ್ಟಕ್ಕೆ ಮಿಡಿದ  ರಾಜ್ಯಗಳ ಪೈಕಿಯಲ್ಲಿ ಕರ್ನಾಟಕ ಮೊದಲ ರಾಜ್ಯವಾಗಿದೆ
ಕಲ್ಲಂಗಡಿ ಸಾಗಿಸುತ್ತಿರುವ ಬೆಳೆಗಾರರು
ಕಲ್ಲಂಗಡಿ ಸಾಗಿಸುತ್ತಿರುವ ಬೆಳೆಗಾರರು

ಬೆಂಗಳೂರು: ಲಾಕ್ ಡೌನ್ ಜಾರಿಯಾದ ಬಳಿಕ ರೈತರ ಉತ್ಪನ್ನ ನಷ್ಟವಾಗದಂತೆ ಕೂಡಲೇ ಆಹಾರ ಸಂಸ್ಕರಣಾ ಘಟಕಗಳನ್ನು ತೆರೆಯುವ ಮೂಲಕ ಅವರ ಸಂಕಷ್ಟಕ್ಕೆ ಮಿಡಿದ  ರಾಜ್ಯಗಳ ಪೈಕಿಯಲ್ಲಿ ಕರ್ನಾಟಕ ಮೊದಲ ರಾಜ್ಯವಾಗಿದೆ

ಕೃಷಿಕರ ಸಂಕಷ್ಟ ನಿವಾರಣೆ ಕುರಿತಂತೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತ ವಂದಿತಾ ಶರ್ಮಾ, ಲಾಕ್ ಡೌನ್ ಅವಧಿಯಲ್ಲಿ ಕೃಷಿ ಮತ್ತು ಕೈಗಾರಿಕೆ ಸಮಸ್ಯೆಗಳ ಪರಿಹಾರಕ್ಕಾಗಿ ಅನೇಕ ಸರ್ಕಾರಿ ಅಧಿಕಾರಿಗಳು ವಾರದಲ್ಲಿ ಎಲ್ಲಾ ವೇಳೆಯಲ್ಲೂ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಜ್ಯದಿಂದ ಹೆಚ್ಚಿನ ಪ್ರಮಾಣದ ಕೃಷಿ ಹಾಗೂ ತೋಟಗಾರಿಕಾ ಉತ್ಪನ್ನಗಳನ್ನು ದೇಶ ಹಾಗೂ ವಿದೇಶಗಳಿಗೆ ರಫ್ತು ಮಾಡಲಾಗಿದೆ. ಲಾಕ್ ಡೌನ್ ಜಾರಿಯಾದ ಸ್ವಲ್ಪ ದಿನಗಳಲ್ಲಿಯೇ ಅತ್ಯವಶ್ಯಕ ಸರಕುಗಳ ಸಾಗಾಟಕ್ಕೆ ಅವಕಾಶ ಮಾಡಿಕೊಡುವ ಮೂಲಕ ರೈತರಿಗೆ ನೆರವು ನೀಡಲಾಗಿದೆ ಎಂದು ತಿಳಿಸಿದರು. 

ಎಲ್ಲಾ ಅಂತರ ಜಿಲ್ಲಾ ಹಾಗೂ ಅಂತರ್ ರಾಜ್ಯ ಗಡಿಗಳು ಬಂದ್ ಆಗಿದ್ದ ಕಾರಣ ಮಾರ್ಚ್ ಮಾಸಾಂತ್ಯದಲ್ಲಿ ತರಕಾರಿಗಳು ಹಾಗೂ ಹಣ್ಣುಗಳನ್ನು ರಾಜ್ಯದಿಂದ ಹೊರಗಡೆ ಸಾಗಿಸುವುದು ತುಂಬಾ ಕಷ್ಟಕರವಾಗಿತ್ತು. ಹಣ್ಣು ಮತ್ತು ತರಕಾರಿಗಳನ್ನು ಸಾಗಿಸುವ ಟ್ರಕ್ ಗಳಿಗೆ ಅವಕಾಶ ನೀಡುವಂತೆ ನಮ್ಮ ವಸ್ತುಗಳನ್ನು ಖರೀದಿಸುವ ರಾಜ್ಯಗಳ ಮನವೊಲಿಸಲಾಯಿತು ಎಂದು ತಿಳಿಸಿದರು. 

ಕರ್ನಾಟಕದಲ್ಲಿ ಬೆಳೆಯುವ ಫೈನಾಪಲ್ ಹಣ್ಣುಗಳಿಗೆ ದೆಹಲಿ ದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಅಜಾದ್ ಪುರ ಮಂಡಿ ಈವರೆಗೂ ಮುಚ್ಚಲ್ಪಟ್ಟಿದೆ. ಕೇರಳ ಹೆಚ್ಚಿನ ಪ್ರಮಾಣದ ಬಾಳೆಹಣ್ಣು ಮತ್ತು ದ್ರಾಕ್ಷಿಯನ್ನು ಖರೀದಿಸುತ್ತದೆ ಆದರೆ, ಹಣ್ಣು ಸಾಗಾಟದ ತೊಂದರೆ ಎದುರಾಗಿದೆ. ಟ್ರಕ್ ಗಳಿಗೆ ಅವಕಾಶ ನೀಡುವಂತೆ ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ರಾಜ್ಯಗಳನ್ನು ಮನವೊಲಿಸಿದ್ದಾಗಿ ನುಡಿದರು. 

ಈ ಮಧ್ಯೆ ರೈತರ ಕುಂದುಕೊರತೆಗಳನ್ನು ಬಗೆಹರಿಸಲು ಕೃಷಿ ವಾರ್  ಕೊಠಡಿಯೊಂದನ್ನು ತೆರೆಯಲಾಗಿದೆ. 75 ಆಹಾರ ಸಂಸ್ಕರಣಾ ಘಟಕಗಳನ್ನು ಆರಂಭಿಸಲಾಗಿದೆ.ಅವರಿಗೆ ಪಾಸ್ ನೀಡಲಾಗಿದ್ದು, ಯಾವುದೇ ರೀತಿಯ ಅಡಚಣೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ. 300 ಮೊಬೈಲ್ ಹಾಪ್ ಕಾಮ್ಸ್  ವ್ಯವಸ್ಥೆ ಮಾಡಿದ್ದೇವೆ. ಹಣ್ಣು ಮತ್ತು ತರಕಾರಿಗಳ ಬೃಹತ್ ಖರೀದಿಗಾಗಿ ಸ್ಥಳಕ್ಕಾಗಿ ನಿವಾಸಿಗಳ ಕಲ್ಯಾಣ ಅಸೋಸಿಯೇಷನ್ ಬಳಿ ಮನವಿ ಮಾಡಿಕೊಳ್ಳಲಾಗಿತ್ತು.ಲಾಕ್ ಡೌನ್ ವೇಳೆಯಲ್ಲಿ ಕರ್ನಾಟಕದಿಂದ 1, 500 ಮೆಟ್ರಿಕ್ ಟನ್ ತರಕಾರಿ ಹಾಗೂ ಹಣ್ಣುಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ರಫ್ತು ಮಾಡಿದೆ ಎಂದು ವಂದಿತಾ ಶರ್ಮಾ ತಿಳಿಸಿದರು.

ಬೇಡಿಕೆ ಇಲ್ಲದೆ ಅನೇಕ ರೈತರು ಬೆಳೆದ ಹಣ್ಣುಗಳು ಹಾಗೂ ತರಕಾರಿಗಳು ನಷ್ಟವಾಗಿವೆ ಎಂದು ಹೇಳಿದ ಅವರು, ಉಚಿತ ದರದಲ್ಲಿ ಶೈತ್ಯಾಗಾರದಲ್ಲಿ ಹಣ್ಣುಗಳನ್ನು ಇಡಲು ಆಫರ್ ನೀಡಿದ್ದೇವು. ಆದರೆ, ಹೆಚ್ಚಿನ ಪ್ರತಿಕ್ರಿಯೆ ಬರಲಿಲ್ಲ ಎಂದು ಅವರು ಹೇಳಿದರು.

ಪವಿತ್ರ ರಂಜಾನ್ ಮಾಸದಲ್ಲಿ ಕಲ್ಲಂಗಡಿ ಹಣ್ಣಿಗೆ ಉತ್ತಮ ಬೆಲೆ ದೊರೆಯುವ ನಿರೀಕ್ಷೆಯಿದೆ. ಈ ಹಿಂದೆ ಕೆಜಿಗೆ 5 ರಿಂದ 6 ರೂಪಾಯಿಗೆ ಮಾರಾಟವಾಗುತ್ತಿದ್ದ ಕಲ್ಲಂಗಡಿ ಹಣ್ಣು 7ರಿಂದ 8 ರೂಪಾಯಿಗೆ ಮಾರಾಟವಾಗುತ್ತಿದೆ ಎಂದು ತೋಟಗಾರಿಕೆ ನಿರ್ದೇಶಕ ಬಿ. ವೆಂಕಟೇಶ್ ತಿಳಿಸಿದರು. 

ರಾಜ್ಯದಲ್ಲಿ ಮಾರ್ಚ್ ಹಾಗೂ ಮೇ ನಡುವೆ ಪ್ರತಿದಿನ ರಾಜ್ಯದಲ್ಲಿ 700 ಟನ್ ಪೈನಾಪಲ್ ಹಣ್ಣನ್ನು ಬೆಳೆಯಲಾಗುತಿತ್ತು. ಆದರೆ, ಲಾಕ್ ಡೌನ್ ನಿಂದ ಸಾಗಣೆ ಸಮಸ್ಯೆ ಎದುರಾಗಿ ದೆಹಲಿ ಮತ್ತಿತರ ಉತ್ತರ ಭಾರತ ರಾಜ್ಯಗಳಿಂದ ಬೇಡಿಕೆ ಕಡಿಮೆಯಾಗಿದೆ. ರಾಜ್ಯದೊಳಗೆ 250ರಿಂದ 300ಟನ್ ಕಲ್ಲಂಗಡಿ ಮಾರಾಟ ಮಾಡಲು ಯತ್ನಿಸಲಾಗುತ್ತಿದೆ. ಟೊಮೋಟೋದೇ ದೊಡ್ಡ ಸಮಸ್ಯೆಯಾಗಿದೆ. ಪ್ರತಿದಿನ ಏನಿಲ್ಲವೆಂದರೂ 1500 ಟನ್ ಟೊಮೋಟ್ಯೋ ಉತ್ಪಾದಿಸಲಾಗುತ್ತದೆ. ನಮ್ಮ ಸಂಸ್ಕರಣಾ ಘಟಕಗಳಲ್ಲಿ 250 ಟನ್ ನಷ್ಟು ಇಡಬಹುದಾಗಿದೆ. ಚೆನ್ನೈ ಮತ್ತು ಕೇರಳ ಟೊಮ್ಯಾಟೋಗೆ ದೊಡ್ಡ ಮಾರುಕಟ್ಟೆಯಾಗಿದೆ. ಆದರೆ, ಸಾಗಾಟದ ಸಮಸ್ಯೆಯಾಗಿದೆ ಎಂದು ವೆಂಕಟೇಶ್ ತಿಳಿಸಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com