ಬೆಂಗಳೂರು: ಗುಂಡಿನ ಮತ್ತು ತಂದ ಆಪತ್ತು, ಹಲ್ಲೆ ನಡೆಸಿದ್ದ ಸ್ನೇಹಿತನಿಗೆ ಚಾಕುವಿನಿಂದ ಇರಿದು ಕೊಲೆ

ತನ್ನ ಮೇಲೆ ಹಲ್ಲೆ ನಡೆಸಿದ ಸಹೋದರರ ಬಗ್ಗೆ ಆಕ್ರೋಶಗೊಂಡಿದ್ದ ಯುವಕನೊಬ್ಬ ಕಳೆದ ರಾತ್ರಿ ಸಹೋದರರ ಪೈಕಿ ತಮ್ಮನಿಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ತನ್ನ ಮೇಲೆ ಹಲ್ಲೆ ನಡೆಸಿದ ಸಹೋದರರ ಬಗ್ಗೆ ಆಕ್ರೋಶಗೊಂಡಿದ್ದ ಯುವಕನೊಬ್ಬ ಕಳೆದ ರಾತ್ರಿ ಸಹೋದರರ ಪೈಕಿ ತಮ್ಮನಿಗೆ ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಾಮಾಕ್ಷಿಪಾಳ್ಯ ನಿವಾಸಿ ಪುರುಷೋತ್ತಮ್ (34) ಎಂದು ಕೊಲೆಯಾದ ಯುವಕ. ಪುರುಷೋತ್ತಮ್ ಮತ್ತು ದೇವರಾಜ್ ಸಹೋದರರಾಗಿದ್ದು, ಕಾಮಾಕ್ಷಿಪಾಳ್ಯದಲ್ಲಿ ದೇವರಾಜ್ ವೆಲ್ಡಿಂಗ್ ಶಾಪ್ ಇಟ್ಟುಕೊಂಡು ವೆಲ್ಡಿಂಗ್ ಕೆಲಸ ಮಾಡುತ್ತಿದ್ದರು.
ಮಾರುತಿ ನಗರದಲ್ಲಿರುವ ಸ್ನೇಹಿತ ಗಿರೀಶ್ ಮನೆಗೆ ಪಾರ್ಟಿ ಮಾಡಲು ಪುರುಷೋತ್ತಮ್ ತನ್ನ ಅಣ್ಣ ದೇವರಾಜ್ ಹಾಗೂ ಸ್ನೇಹಿತರೊಂದಿಗೆ ತೆರಳಿದ್ದಾರೆ. ಪಾರ್ಟಿ ವೇಳೆ ಇವರೆಲ್ಲರೂ ಮದ್ಯ ಸೇವಿಸಿದ್ದರು.

ಈ ಸಂದರ್ಭದಲ್ಲಿ ಗಿರೀಶ್ ಹಾಗೂ ಪುರುಷೋತ್ತಮ್ ನಡುವೆ ಕ್ಷುಲ್ಲಕ ವಿಚಾರಕ್ಕೆ ಜಗಳವಾಗಿದೆ. ಪುರುಷೋತ್ತಮ್‍ಗೆ ಗಿರೀಶ್ ಬೈದುದ್ದರಿಂದ ಕೋಪಗೊಂಡು ಸಹೋದರರು ಈತನ ಮೇಲೆ ಹಲ್ಲೆ ನಡೆಸಿದಾಗ ಸ್ನೇಹಿತರು ಜಗಳ ಬಿಡಿಸಿದ್ದಾರೆ.

ನಂತರ ಅಲ್ಲಿಂದ ಎಲ್ಲರೂ ತೆರಳಿದ್ದಾರೆ. ರಾತ್ರಿ 8.45ರ ಸುಮಾರಿನಲ್ಲಿ ಪುರುಷೋತ್ತಮ್ ಸ್ನೇಹಿತನನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದಾಗ ಕಾಮಾಕ್ಷಿಪಾಳ್ಯದ 3ನೇ ಮುಖ್ಯರಸ್ತೆಯಲ್ಲಿ ಗಿರೀಶ್ ಎದುರಾಗಿದ್ದಾನೆ. ಈ ಸಂದರ್ಭದಲ್ಲಿ ಪುರುಷೋತ್ತಮ್ ಬೈಕ್ ನಿಲ್ಲಿಸಿದಾಗ ನನಗೆ ಯಾಕೆ ಹೊಡೆದಿದ್ದು ಎಂದು ಗಿರೀಶ್ ಪ್ರಶ್ನಿಸಿ ಜಗಳ ತೆಗೆದು ಚಾಕುವಿನಿಂದ ಪುರುಷೋತ್ತಮ್‍ಗೆ ಇರಿದು ಪರಾರಿಯಾಗಿದ್ದಾನೆ.

ಚಾಕುವಿನಿಂದ ಇರಿತಕ್ಕೊಳಗಾದ ಪುರುಷೋತ್ತಮ್ ಕುಸಿದು ಬಿದ್ದಾಗ ಜೊತೆಯಲ್ಲಿದ್ದ ಸ್ನೇಹಿತ ತಕ್ಷಣ ಆಸ್ಪತ್ರೆಗೆ ಕರೆದೊಯ್ದರಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ಸುದ್ದಿ ತಿಳಿದ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾಗಿರುವ ಆರೋಪಿ ಗಿರೀಶ್‍ಗಾಗಿ ಶೋಧ ನಡೆಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com