ರಾಮನಗರ: ರಾಮನಗರ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೋನಾ ಪ್ರಕರಣ ಕಂಡುಬಂದಿಲ್ಲ. ಹೀಗಾಗಿ ಜಿಲ್ಲೆಯನ್ನು ಹಸಿರು ವಲಯ ಎಂದು ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಷ್ಟ ಅನುಭವಿಸುತ್ತಿರುವ ಸಣ್ಣ ಹೋಟೆಲ್ ಉದ್ಯಮಿಗಳ ಬದುಕಿನ ದೃಷ್ಟಿಯಿಂದ ಅವರಿಗೆ ಹೋಟೆಲ್ ತೆರೆಯಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಸಂಸದ ಡಿ.ಕೆ. ಸುರೇಶ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಫೇಸ್ಬುಕ್ ವಿಡಿಯೋ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿರುವ ಡಿ.ಕೆ. ಸುರೇಶ್, ಜಿಲ್ಲೆಯಲ್ಲಿರುವ ಸಣ್ಣಪುಟ್ಟ ಹೋಟೆಲ್ಗಳನ್ನು ಬಂದ್ ಮಾಡಲಾಗಿದ್ದು, ಸಾಮಾನ್ಯ ಜನರಿಗೆ ಹಾಗೂ ಉದ್ಯಮ ನಡೆಸುತ್ತಿರುವವರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.
ಸಾಲ ಮಾಡಿಕೊಂಡು ಕೆಲವರು ಉದ್ಯಮಕ್ಕೆ ಕೈಹಾಕಿದ್ದಾರೆ. ಆದರೆ ಕಳೆದ ಒಂದು ತಿಂಗಳಿಂದ ವ್ಯಾಪಾರ ವಹಿವಾಟಿಲ್ಲದ ಕಾರಣ ಎಲ್ಲರೂ ಕೂಡ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಹಾಗಾಗಿ ಸಿಎಂ ಯಡಿಯೂರಪ್ಪನವರು ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಿ ತ್ವರಿತವಾಗಿ ಜಿಲ್ಲೆಯಲ್ಲಿ ಹೋಟೆಲ್ಗಳ ಪ್ರಾರಂಭಕ್ಕೆ ಸೂಚನೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
Advertisement