ಬೆಂಗಳೂರು: ನಶೆಯಲ್ಲಿದ್ದ ಕಾರು ಚಾಲಕ ತನ್ನ ಪತ್ನಿಯನ್ನು ಚಾಕುವಿನಿಂದ ಕತ್ತು ಸೀಳಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ಹೊರವಲಯದ ಮಾದನಾಯ್ಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಮಾದನಾಯ್ಕನಹಳ್ಳಿಯ ಸಿದ್ಧೇಶ್ವರ ಬಡಾವಣೆಯ 24 ವರ್ಷದ ದಿವ್ಯಾ ಕೊಲೆಯಾದ ಗೃಹಿಣಿ. ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದ ತೀರ್ಥಪ್ರಸಾದ್, ಪತ್ನಿಯೊಂದಿಗೆ ಆಗಾಗ ಜಗಳ ಮಾಡುತ್ತಿದ್ದನು.
ಕೊರೊನಾ ಲಾಕ್ ಡೌನ್ ಸಡಿಲಿಸಿ ಮದ್ಯದ ಅಂಗಡಿ ಆರಂಭವಾಗಿದ್ದರಿಂದ ಕಂಠಪೂರ್ತಿ ಕುಡಿದಿದ್ದ ಆತ ಪತ್ನಿಯೊಂದಿಗೆ ಜಗಳ ಮಾಡುತ್ತಿದ್ದು, ರಾತ್ರಿ ಇಬ್ಬರ ನಡುವಿನ ಜಗಳ ವಿಕೋಪಕ್ಕೆ ತಿರುಗಿದ್ದರಿಂದ ಆಕ್ರೋಶಗೊಂಡ ತೀರ್ಥಪ್ರಸಾದ್, ಚಾಕುವಿನಿಂದ ಕತ್ತು ಸೀಳಿ ಪತ್ನಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪರಾರಿಯಾದ ಕಾರು ಚಾಲಕ ತೀರ್ಥಪ್ರಸಾದ್ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಗ್ರಾಮಾಂತರ ಎಸ್ ಪಿ ರವಿ ಚೆನ್ನಣ್ಣನವರ್ ತಿಳಿಸಿದ್ದಾರೆ.
Advertisement