ಮದ್ಯದಂಗಡಿ ತೆರೆದ ಬಳಿಕ ನಗರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ!

43 ದಿನಗಳ ಲಾಕ್ ಡೌನ್ ಬಳಿಕ ಮದ್ಯದಂಗಡಿ ತೆರೆದಿದ್ದು, ಮದ್ಯ ಪ್ರಿಯರ ಖುಷಿಗೆ ಕಾರಣವಾಗಿದೆಯಾದರೂ, ಅತ್ತ ಪೊಲೀಸರಿಗೆ ಮಾತ್ರ ತಲೆನೋವು ಹೆಚ್ಚಾಗುವಂತೆ ಮಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 43 ದಿನಗಳ ಲಾಕ್ ಡೌನ್ ಬಳಿಕ ಮದ್ಯದಂಗಡಿ ತೆರೆದಿದ್ದು, ಮದ್ಯ ಪ್ರಿಯರ ಖುಷಿಗೆ ಕಾರಣವಾಗಿದೆಯಾದರೂ, ಅತ್ತ ಪೊಲೀಸರಿಗೆ ಮಾತ್ರ ತಲೆನೋವು ಹೆಚ್ಚಾಗುವಂತೆ ಮಾಡಿದೆ.

ಹೌದು.. ಒಂದು ಕಡೆ ಕೊರೋನಾ ಸಂಕಷ್ಟದಿಂದ ತತ್ತರಿಸಿರುವಂತೆಯೇ ಇತ್ತ ಮದ್ಯದಂಗಡಿಗಳು ಓಪನ್ ಆದ ಬಳಿಕ ಕುಡುಕಗ ಗಲಾಟೆಗಳೂ ಕೂಡ ಪೊಲೀಸರಿಗೆ ಹೊಸ ತಲೆನೋವು ಸೃಷ್ಟಿಸುತ್ತಿದೆ. ಮದ್ಯದಂಗಡಿಗಳು ತೆರೆದ ಅಂದರೆ ಕಳೆದ ಸೋಮವಾರದಿಂದ ಈ ವರೆಗೂ ನಗರದಲ್ಲಿ  8 ಕೊಲೆಗಳು ನಡೆದಿವೆ. ಈ ಎಲ್ಲ ಕೊಲೆಗಳೂ ಮದ್ಯದ ಮತ್ತಿನಲ್ಲಿ ನಡೆದ ಕೊಲೆಗಳಾಗಿವೆ. 

ಅವಲಹಳ್ಳಿ ಮತ್ತು ಮಾದನಾಯಕನ ಹಳ್ಳಿ ನಡೆದ ಕೊಲೆಗಳೂ ಕೂಡ ಮದ್ಯದ ಮತ್ತಿನಲ್ಲಿ ನಡೆದ ಕೊಲೆಗಳಾಗಿವೆ. ಕೊಲೆಗಳು ಮಾತ್ರವಲ್ಲದೇ ಲಾಕ್ ಡೌನ್ ವಿನಾಯಿತಿ ನೀಡಿದ ಬಳಿಕ ಹಲ್ಲೆ, ಕೊಲೆ ಪ್ರಯತ್ನ ಮತ್ತು ಪ್ರಕರಣಗಳೂ ನಡೆದಿವೆ. ಗೃಹ ಹಿಂಸಾಚಾರದಂತಹ ಸಾಕಷ್ಟು  ಪ್ರಕರಣಗಳು ನಗರದ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 

ಈಗಷ್ಟೇ ಅಲ್ಲ, ಲಾಕ್ ಡೌನ್ ಗಿಂತಲೂ ಮುಂಚೆಯೂ ಕೂಡ ದಾಖಲಾಗಿದ್ದ ಅಪರಾಧ ಪ್ರಕರಣಗಳ ಪೈಕಿ ಬಹುತೇಕ ಪ್ರಕರಣಗಳು ಮದ್ಯದ ಮತ್ತಿನಲ್ಲಿ ನಡೆದ ಪ್ರಕರಣಗಳಾಗಿದ್ದವು. ಈ ಬಗ್ಗೆ ಮಾತನಾಡಿರುವ ತಜ್ಞರು ಮದ್ಯ ಸೇವಿಸಿದಾಗ ಮಾನವ ಯೋಚಿಸಿ ನಿರ್ಧಾರ ಕೈಗೊಳ್ಳುವ  ಸಾಮರ್ಥ್ಯ ಕಡಿತವಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚು ಅಪರಾಧ ಪ್ರಕರಣಗಳ ಹಿಂದೆ ಮದ್ಯದ ಪಾತ್ರವಿರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗೆಂದ ಮಾತ್ರಕ್ಕೆ ಕುಡಿಯದಿರುವ ವ್ಯಕ್ತಿ ಅಪರಾಧ ಮಾಡುವುದಿಲ್ಲ ಎಂದು ಅರ್ಥವಲ್ಲ. ಆದರೆ ಕುಡಿತ ಮಾನವನ ಯೋಚಿಸಿ ನಿರ್ಧಾರ  ಕೈಗೊಳ್ಳುವ ಸಾಮಾರ್ಥ್ಯ ಕುಂಠಿತಗೊಳಿಸುತ್ತದೆ ಎಂದು ಹೇಳಿದ್ದಾರೆ.

ಕೆಲವೊಮ್ಮೆ ಕುಡಿತ ಮತ್ತಲ್ಲಿ ಬಯ್ಯುವುದು ಕೂಡ ಸಾಕಷ್ಟು ಅಪರಾಧ ಕೃತ್ಯಗಳಿಗೆ ಕಾರಣವಾಗುತ್ತದೆ. ಬೈಗುಳಗಳೇ ಅಪರಾಧಕ್ಕೆ ಮೂಲವಾಗಿರುವುದನ್ನೂ ನಾವು ನೋಡಿದ್ದೇವೆ. ಇನ್ನು ಸಾಕಷ್ಟು ಬಾರಿ ಕಾರಣವೇ ಇಲ್ಲದೇ ಅಪರಾಧಗಳು ನಡೆದು ಹೋಗಿರುತ್ತದೆ. ಅದರಲ್ಲೂ ವೈಯುಕ್ತಿಕ  ದ್ವೇಷ, ಅಸೂಯೆ ಇದ್ದಾಗ ಇಂತಹ ಪ್ರಕರಣಗಳು ಹೆಚ್ಚಾಗುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com