ಬೆಂಗಳುರು: ವೈದ್ಯರ ನಿರ್ಲಕ್ಷದ ಪರಿನಾಮ ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರಕದೆ ಮಹಿಳೆಯೊಬ್ಬರು ಆಸ್ಪತ್ರೆ ಮುಂದೆಯೇ ಸಾವನ್ನಪ್ಪಿರುವ ಘಟನೆ ಬೆಂಗಳುರು ಜಯನಗರದಲ್ಲಿ ನಡೆದಿದೆ.
ಖಾಸಗಿ ಆಸ್ಪತ್ರೆಯ ನಿರ್ಲಕ್ಷದ ಕಾರಣ ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಜಯನಗರದ ಭೈರಸಂದ್ರ ನಿವಾಸಿ 47 ವರ್ಷದ ಮಹಿಳೆ ಸಾವಿಗೀಡಾಗಿದ್ದಾರೆ. ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡ ನಂತರ ಕುಟುಂಬ ಸದಸ್ಯರು ಆಕೆಯನ್ನು ಮೊದಲು ಒಂದು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದು ಅಲ್ಲಿ ಒಂದು ದಿನ ಚಿಕಿತ್ಸೆ ನೀಡಲಾಗಿದೆ. ಆ ಬಳಿಕ ಇಲ್ಲಿ ಆಗಲ್ಲ, ಭೇರೆಡೆ ಕೊಂಡೊಯ್ಯಿರಿ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ.
ವೈದ್ಯರ ಮಾತಿನಂತೆ ಮಹಿಳೆಯನ್ನು ಅಲ್ಲೇ ಸಮೀಪದಲ್ಲಿದ್ದ ಇನ್ನೊಂದು ಪ್ರಸಿದ್ದ ಆಸ್ಪತ್ರೆಗೆ ದಾಖಲಿಸಲು ಕುಟುಂಬ ಸದಸ್ಯರು ತೀರ್ಮಾನಿಸಿದ್ದಾರೆ. ಆ ವೇಳೆ ಅಂಬ್ಯುಲೆನ್ಸ್ ಮೂಲಕ ಕರೆತರಲಾದ ಮಹಿಳೆಯನ್ನು ದಾಖಲಿಸಿಕೊಳ್ಲಲು ಆ ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಸುಮಾರು 45 ನಿಮಿಷಗಳ ಕಾಲ ಆಸ್ಪತ್ರೆಯ ಹೊರಭಾಗದಲ್ಲಿಯೇ ಕಾಲಕಳೆದ ಮಹಿಳೆ ತೀವ್ರ ಹೊಟ್ಟೆನೋವಿನಿಂದ ಒದ್ದಾಡಿದ್ದಾರೆ. ಆ ಬಳಿಕ ಆಸ್ಪತ್ರೆಯ ಮುಂಭಾಗವೇ ಕೊನೆಯುಸಿರೆಳೆದಿದ್ದಾರೆ.
ಕುಟುಂಬ ಸದಸ್ಯರು ಒತ್ತಾಯಿಸಿದ ನಂತರ ಅಂತಿಮವಾಗಿ ಆಕೆಯನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳಲಾಗಿದ್ದು "ರಾತ್ರಿ 11.59ಕ್ಕೆ ಮಹಿಳೆ ಮೃತಪಟ್ಟಿದ್ದಾಳೆ, ದಯವಿಟ್ಟು ನಮ್ಮನ್ನು ಕ್ಷಮಿಸಿ" ಎಂದು ವೈದ್ಯರು ಕೈಚೆಲ್ಲಿದ್ದಾರೆ.ಇದರಿಂದ ಆಸ್ಪತ್ರೆ ಆಡಳಿತ ಹಾಗೂ ವೈದ್ಯರ ಮೇಲೆ ಕುಟುಂಬಸ್ಥರು ತೀವ್ರ ನಿರ್ಲಕ್ಷದ ಆರೋಪ ಹೊರಿಸಿದ್ದಾರೆ.
Advertisement