ಬೆಂಗಳೂರು: ನಿನ್ನೆ ಸಂಜೆಯಿಂದ ಈವರೆಗೂ ರಾಜ್ಯದಲ್ಲಿ 10 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 858ಕ್ಕೆ ಏರಿಕೆ ಆಗಿದೆ. ಈ ಪೈಕಿ 31 ರೋಗಿಗಳು ಮೃತಪಟ್ಟಿದ್ದು, 422 ರೋಗಿಗಳು ಆಸ್ಪತ್ರೆಯಿಂದ ಡಿಸ್ಚಾರ್ಚ್ ಆಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ದಾವಣಗೆರೆಯಲ್ಲಿ 3, ಕಲಬುರ್ಗಿಯಲ್ಲಿ 1, ಬೀದರ್ ನಲ್ಲಿ 2, ಹಾವೇರಿ ಜಿಲ್ಲೆ ಶಿಗ್ಗಾವಿಯಲ್ಲಿ 1, ಬಾಗಲಕೋಟೆ ಜಿಲ್ಲೆಯ ಬನಹಟ್ಟಿ, ಬದಾಮಿಯಲ್ಲಿ ತಲಾ 1 ಹಾಗೂ ವಿಜಯಪುರದಲ್ಲಿ 1 ಪ್ರಕರಣಗಳು ಪತ್ತೆಯಾಗಿವೆ. ನಿನ್ನೆ ಒಂದೇ ದಿನ 54 ಪ್ರಕರಣಗಳು ದಾಖಲಾಗುವ ಮೂಲಕ ರಾಜ್ಯದಲ್ಲಿ ಆತಂಕ ಹೆಚ್ಚಿಸಿತ್ತು. ಇಂದು ಬೆಂಗಳೂರಿನಲ್ಲಿ ಒಂದೇ ಒಂದು ಪ್ರಕರಣ ದಾಖಲಾಗಿಲ್ಲ.
849ನೇ ಸಂಖ್ಯೆಯ ರೋಗಿ ಕಲಬುರಗಿಯ 38 ವರ್ಷದ ಪುರುಷನಾಗಿದ್ದು, 850, 851 ಹಾಗೂ 852ನೇ ಸಂಖ್ಯೆಯ ರೋಗಿಗಳು ದಾವಣಗೆರೆಯವರಾಗಿದ್ದಾರೆ. 853ನೇ ಸೋಂಕಿತ ಹಾವೇರಿ ಜಿಲ್ಲೆ ಶಿಗ್ಗಾವಿಯ 26 ವರ್ಷದ ಯುವಕ, 854ನೇ ರೋಗಿ ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ 20 ವರ್ಷದ ಯುವಕ ಹಾಗೂ 855ನೇ ರೋಗಿ ಬದಾಮಿಯ 28 ವರ್ಷದ ಯುವಕನಾಗಿದ್ದಾರೆ.856ನೇ ಸೋಂಕಿತೆ ವಿಜಯಪುರದ 20 ವರ್ಷದ ಯುವತಿ, 857 ಹಾಗೂ 858ನೇ ರೋಗಿಗಳು ಬೀದರ್ ನ ಪುರುಷರಾಗಿದ್ದಾರೆ.
ಕಲಬುರಗಿಯ 38 ವರ್ಷದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ. ಈತನ ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ. ದಾವಣಗೆರೆಯಲ್ಲಿ ಸೋಂಕಿತರ ಸಂಪರ್ಕ ಹೊಂದಿದೆ 33 ವರ್ಷದ ವ್ಯಕ್ತಿ, 30 ಮತ್ತು 50 ವರ್ಷದ ಮಹಿಳೆಯರಲ್ಲಿ ಸೋಂಕು ದೃಢಪಟ್ಟಿದೆ.
ಹಾವೇರಿಯ ಶಿಗ್ಗಾವಿಯಲ್ಲಿ ಮುಂಬೈಗೆ ಪ್ರಯಾಣ ಬೆಳೆಸಿರುವ ಹಿನ್ನೆಲೆ ಹೊಂದಿರುವ 26 ವರ್ಷದ ಯುವಕ, ಬಾಗಲಕೋಟೆಯ ಬನಹಟ್ಟಿಯಲ್ಲಿ ಗುಜರಾತ್ ನ ಅಹಮದಾಬಾದ್ ಗೆ ಪ್ರಯಾಣ ಮಾಡಿರುವ ಹಿನ್ನೆಲೆಯುಳ್ಳ 20 ವರ್ಷದ ಯುವಕರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಸೋಂಕಿತ ಗರ್ಭಿಣಿ ಮಹಿಳೆ (688 ರೋಗಿ) ಸಂಪರ್ಕ ಹೊಂದಿದ 50 ವರ್ಷದ ವ್ಯಕ್ತಿ, ಬೀದರ್ ನ 50 ಮತ್ತು 27 ವರ್ಷದ ವ್ಯಕ್ತಿಗಳಲ್ಲಿ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
Advertisement