ತುಮಕೂರು: ಏಳು ತಿಂಗಳ ಗರ್ಭಿಣಿ ಸೇರಿದಂತೆ ತುಮಕೂರಿನ ಒಂದೇ ಕುಟುಂಬದ ಐವರು ಅಬುಧಾಬಿಯಲ್ಲಿ ಸಿಲುಕಿದ್ದು, ಅಧಿಕಾರಿಗಳನ್ನು ತಲುಪಲು ಅವರು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದು, ತವರಿಗೆ ಮರಳಲು ತಮ್ಮ ನೆರವಿಗೆ ಬರುವಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವರಿಗೆ ಮನವಿ ಮಾಡಿದ್ದಾರೆ.
ತುರುವೇಕೆರೆ ತಾಲೂಕಿನ ಸಂಪಿಗೆ ನಿವಾಸಿ ಮೆಕ್ಯಾನಿಕಲ್ ಎಂಜಿನಿಯರ್ ಮೋಹನ್ ರಾಜ್, ಆತನ ಗರ್ಭಿಣಿ ಪತ್ನಿ, ಎರಡು ವರ್ಷದ ಮಗ ಅಬುಧಾಬಿಯಲ್ಲಿದ್ದಾರೆ. ಅಲ್ಲದೆ ತಮ್ಮ ಗರ್ಭಿಣಿ ಮಗಳನ್ನು ನೋಡಿಕೊಳ್ಳಲು ಅಲ್ಲಿಗೆ ಹೋಗಿದ್ದ ಮೋಹನ್ ರಾಜ್ ಅವರ ಅತ್ತೆ, ಮಾವ ಸಹ ಅಬುಧಾಯಿಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.
ಇತ್ತೀಚಿಗೆ ವಿವಿಧ ದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರಲು ವಿಮಾನ ಸೇವೆ ಆರಂಭಿಸಲಾಗಿದ್ದು, ಮೋಹನ್ ರಾಜ್ ಸಹ ಕರ್ನಾಟಕಕ್ಕೆ ಬರುವ ಯತ್ನ ನಡೆಸುತ್ತಿದ್ದಾರೆ.
ರಾಜ್ಯಕ್ಕೆ ಬರುವುದಕ್ಕಾಗಿ ಮೋಹನ್ ರಾಜ್ ಭಾರತೀಯ ರಾಯಭಾರ ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
"ದುಬೈನಲ್ಲಿರುವವರಿಗೆ ಆದ್ಯತೆ ನೀಡಲಾಗಿದೆ. ಆದರೆ ನಮ್ಮಂತೆಯೇ ಅಬುಧಾಬಿಯಲ್ಲಿ ಮೂವರು ಗರ್ಭಿಣಿಯರು ಸೇರಿದಂತೆ ಏಳು ಕುಟುಂಬಗಳು ಸಿಲುಕಿವೆ ಮತ್ತು ಅವರ ಕೆಲವು ವೀಸಾಗಳ ಅವಧಿ ಮುಗಿದಿದೆ" ಎಂದು ಮೋಹನ್ ರಾಜ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ನಾನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರಿಗೆ ಟ್ವೀಟ್ ಮಾಡಿದ್ದೆ. ಆದರೆ ಪ್ರಯೋಜನೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.
"ಮೇ 17 ರಂದು ಹೊರಡಲು ಸಿದ್ಧವಾಗಿರುವ ಮುಂದಿನ ವಿಮಾನವನ್ನು ಹತ್ತಲು ನಾವು ಆಶಿಸುತ್ತಿದ್ದೇವೆ. ಬೆಂಗಳೂರು ಅಥವಾ ಮಂಗಳೂರಿಗೆ ಇಳಿಯಲು ನಾವು ಸಿದ್ಧರಾಗಿರುವುದರಿಂದ ನಮಗೆ ಸಹಾಯ ಮಾಡುವಂತೆ ಸಿಎಂ ಮತ್ತು ಸಚಿವರನ್ನು ಕೋರುತ್ತೇವೆ" ಎಂದು ಮೋಹನ್ ರಾಜ್ ಮನವಿ ಮಾಡಿದ್ದಾರೆ.
Advertisement