ಬೆಂಗಳೂರು: ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ದಾಖಲಿಸಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ಅಜೀಂ ಪ್ರೇಮ್ ಜಿ ವಿರುದ್ಧದ ಸಿಟಿ ಸಿವಿಲ್ ಕೋರ್ಟ್ ನೀಡಿದ್ದ ಸಮನ್ಸ್ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಸಮನ್ಸ್ ರದ್ದು ಕೋರಿ ಅಜೀಂ ಪ್ರೇಮ್ ಜಿ ದಂಪತಿ ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹ ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾ ಮಾಡಿದೆ.
ಅಜೀಂ ಪ್ರೇಮ್ ಜಿ ತಮ್ಮ ಒಡೆತನಕ್ಕೆ ಸೇರಿದ ನಾಲ್ಕು ಕಂಪನಿಗಳನ್ನು ಒಂದು ಕಂಪನಿ ವ್ಯಾಪ್ತಿಗೆ ತಂದಿರುವುದು ಕಾನೂನು ಬಾಹಿರ. ಈ ಕಂಪನಿಗಳ ಆಸ್ತಿ ಸರ್ಕಾರಕ್ಕೆ ಸೇರಬೇಕು' ಎಂದು ಆರೋಪಿಸಿ ಚೆನ್ನೈನ 'ಇಂಡಿಯಾ ಅವೇಕ್ ಫಾರ್ ಟ್ರಾನ್ಸ್ ಪರೆನ್ಸಿ' ಹೆಸರಿನ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆ ಬೆಂಗಳೂರಿನಲ್ಲಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಜನವರಿ 27 ರಂದು ಖಾಸಗಿ ದೂರು ದಾಖಲಿಸಿತ್ತು.
ಈ ದೂರಿನಲ್ಲಿ ಸಂಜ್ಞೇಯ ಅಪರಾಧದ ಆರೋಪಗಳಿವೆ' ಎಂದು ಪರಿಗಣಿಸಿ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ. ಅಜೀಂ ಪ್ರೇಮ್ ಜಿ ಈ ಸಮನ್ಸ್ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಜೀಂ ಪ್ರೇಮ್ ಜಿ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ವಂಚನೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಲೋಕಾಯಯಕ್ತ ನ್ಯಾಯಾಲಯದಲ್ಲಿ ಮೂರು ಖಾಸಗಿ ದೂರುಗಳನ್ನು ದಾಖಲಿಸಲಾಗಿತ್ತು.
ಒಟ್ಟು 31,342 ಕೋಟಿ ರೂ.ಗಳ ಮೌಲ್ಯದ ಈ ಮೂರು ಕಂಪನಿಗಳ ಆಸ್ತಿಯಲ್ಲಿ ಅವರು ಯಾವುದೇ ಹಣಕಾಸಿನ ಆಸಕ್ತಿ ಅಥವಾ ಮಾಲೀಕತ್ವವನ್ನು ಹೊಂದಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.
Advertisement