ಬೆಂಗಳೂರು: ಬೆಂಗಳೂರಿನಲ್ಲಿ ದರೋಡೆಗೆ ಸಂಚು ರೂಪಿಸಿದ್ದ ಐವರು ರೌಡಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಮಾರತ್ ಹಳ್ಳಿಯ ಸಂತೋಷ್ ಕುಮಾರ್ (26 ವರ್ಷ), ಶಶಿಕುಮಾರ್ (28 ವರ್ಷ), ಭಾಸ್ಕರ್ ಆರ್ (19 ವರ್ಷ), ಸ್ಟೀಫನ್ ರಾಜ್ (28 ವರ್ಷ) ಹಾಗೂ ಆರ್ ಕುಮಾರ್ (28 ವರ್ಷ) ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಲಾಂಗ್, ಮಚ್ಚು, ಎರಡು ಖಾರದ ಪುಡಿ ಪೊಟ್ಟಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಸೋಮವಾರ ಸಂಜಯ್ ನಗರದ ಸ್ಮಶಾನ ರಸ್ತೆಯಲ್ಲಿ ಸಾರ್ವಜನಿಕರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ದರೋಡೆಗೆ ಸಂಚು ರೂಪಿಸಲಾಗಿದೆ ಎಂಬ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಬಂಧಿತ ಸಂತೋಷ ಹೆಚ್ ಎಎಲ್ ಪೊಲೀಸ್ ಠಾಣೆ ರೌಡಿ ಶೀಟರ್ ಆಗಿದ್ದು, ಈತನ ವಿರುದ್ಧ ಕೊಲೆ ಯತ್ನ, ದರೋಡೆ ಯತ್ನ ಸೇರಿ ಹಲವು ಪ್ರಕರಣ ದಾಖಲಾಗಿವೆ. ಇನ್ನು ಶಶಿಕುಮಾರ್ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣ ದಾಖಲಾಗಿದ್ದು, ಈತನು ನ್ಯಾಯಾಲಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಭಾಸ್ಕರ್ ಆರ್, ವಿರುದ್ಧ ಮಂಜುನಾಥ್ ನಗರ, ಮಾರತಹಳ್ಳಿ ಹಾಗೂ ಹೆಚ್ ಎಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಸ್ಟೀಫನ್ ರಾಜ್ ವಿರುದ್ಧ ಮಂಜುನಾಥ್ ನಗರ, ಮಾರತ್ ಹಳ್ಳಿ ಹಾಗೂ ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ದೂರು ದಾಖಲಾಗಿದೆ. ಆರ್ ಕುಮಾರ್ ವಿರುದ್ಧ ಅಶ್ವತ್ ನಗರ, ಮಾರತ್ ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಹೆಚ್ ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
Advertisement