ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಮತ್ತು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳ ಸಂಚಾರ ಆರಂಭವಾದ ಖುಷಿಯಲ್ಲಿ ಜನತೆ ಇದ್ದರು.
ಆದರೆ ಬೆಂಗಳೂರು ಪ್ರಯಾಣಿಕರ ಖುಷಿ ಸ್ವಲ್ಪ ಹೊತ್ತಿನಲ್ಲಿಯೇ ಮಾಯವಾಯಿತು. ಬಿಎಂಟಿಸಿ ಪ್ರಯಾಣಿಕರಿಗೆ ದಿನದ, ವಾರದ ಮತ್ತು ತಿಂಗಳ ಪಾಸನ್ನು ಕಡ್ಡಾಯವಾಗಿ ಮಾಡಿಕೊಳ್ಳಬೇಕೆಂದು ಆದೇಶ ಹೊರಡಿಸಿತು. ದಿನದ ಪಾಸಿನ ಮೊತ್ತ 70 ರೂಪಾಯಿ, ಹತ್ತಿರದ ಸ್ಥಳಗಳಿಗೆ ಹೋಗುವ ಪ್ರಯಾಣಿಕರಿಗೆ 70 ರೂಪಾಯಿ ಟಿಕೆಟ್ ಅಗತ್ಯವೂ ಇರುವುದಿಲ್ಲ, ದರ ದುಬಾರಿಯಾಯಿತೆಂದು ಆರೋಪಿಸಿದರು.
ಪ್ರಯಾಣಿಕರಿಂದ ಬಂದ ಟೀಕೆ, ಆರೋಪಗಳಿಂದ ಇದೀಗ ಬಿಎಂಟಿಸಿ 70ರೂಪಾಯಿಯಿಂದ ಟಿಕೆಟ್ ದರವನ್ನು 50 ರೂಪಾಯಿಗೆ ಇಳಿಸಲು ಮುಂದಾಗಿದೆ. ದಿನದ ಪಾಸಿಗೆ 50 ರೂಪಾಯಿ ನಿಗದಿಪಡಿಸಲಾಗುವುದು ಎಂದು ಸಾರಿಗೆ ಇಲಾಖೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ. ಈ ಬಗ್ಗೆ ಮಾತುಕತೆ ಹಂತದಲ್ಲಿದೆ.
ನಗರದಲ್ಲಿ ಸುಮಾರು 2 ಸಾವಿರ ಬಸ್ಸುಗಳು ಸಂಚರಿಸುತ್ತಿದ್ದು ಇಂದು ಅದು 4 ಸಾವಿರಕ್ಕೆ ಹೆಚ್ಚಳವಾಗುವ ಸಾಧ್ಯತೆಯಿದೆ. ಮೈಬಿಎಂಟಿಸಿ ಆಪ್ ಮೂಲಕ ಆನ್ ಲೈ ನ್ ನಲ್ಲಿ ಟಿಕೆಟ್ ನೀಡಲು ಕ್ಯುಆರ್ ಕೋಡ್ ತಪಾಸಣೆಗೆ ಬಿಎಂಟಿಸಿ ಆರಂಭಿಸಿದ್ದು ಇದುವರೆಗೆ ಶೇಕಡಾ 10ರಷ್ಟು ಪ್ರಯಾಣಿಕರು ಮಾತ್ರ ಬಳಸಿದ್ದಾರೆ. ಬಿಎಂಟಿಸಿ ಇ ಟಿಕೆಟ್ ವ್ಯವಸ್ಥೆಯನ್ನು ಕೂಡ ಚಿಂತನೆ ನಡೆಸುತ್ತಿದೆ.
ನಿನ್ನೆ ಕೆಎಸ್ ಆರ್ ಟಿಸಿ ಬಸ್ಸಿನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ಕೆಂಪೇಗೌಡ ಬಸ್ ನಿಲ್ದಾಣದಿಂದ ನಿನ್ನೆ 7,273 ಪ್ರಯಾಣಿಕರು ಸಂಚರಿಸಿದ್ದಾರೆ. ರಾಜ್ಯದ 63 ಕಡೆಗಳಲ್ಲಿ ಬಸ್ ಕಾರ್ಯನಿರ್ವಹಣೆ ಮಾಡಿದ್ದು 789 ಪ್ರಯಾಣಿಕರು ಶಿವಮೊಗ್ಗಕ್ಕೆ 33 ಬಸ್ಸುಗಳಲ್ಲಿ ಹೋಗಿದ್ದಾರೆ, ಅದು ನಿನ್ನೆಯ ದಿನ ಅಧಿಕವಾಗಿತ್ತು.
Advertisement