ಬೆಂಗಳೂರು: ವಲಸಿಗರ ವಿಶೇಷ ರೈಲುಗಳ ಸಂಚಾರ ಹಾಗೂ ಬೆಂಗಳೂರಿನಿಂದ ಅಸಂಖ್ಯಾತ ವಲಸೆ ಕಾರ್ಮಿಕರು ತಮ್ಮೂರಿನತ್ತ ತೆರಳುತ್ತಿರುವುದರಿಂದ ಪ್ರಗತಿಯಲ್ಲಿರುವ ಎರಡನೇ ಹಂತದ ಮೆಟ್ರೋ ಯೋಜನೆ ಮೇಲೆ ತೀವ್ರ ರೀತಿಯ ಪರಿಣಾಮ ಬೀರಿದೆ.
ನಮ್ಮ ಮೆಟ್ರೋ ಕಾಮಗಾರಿಯಲ್ಲಿ ನಿರತರಾಗಿರುವವರ ಪೈಕಿಯಲ್ಲಿ ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್ , ಅಸ್ಸಾಂ , ಪಶ್ಚಿಮ ಬಂಗಾಳ, ಒಡಿಶಾದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಅದರಲ್ಲಿ ನಾಲ್ಕನೇ ಒಂದು ಭಾಗದಷ್ಟು ಜನರು ಊರಿನತ್ತ ಮುಖಮಾಡಿದ್ದಾರೆ, ಇನ್ನೂ ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ವಿಶೇಷ ರೈಲುಗಳಲ್ಲಿ ತೆರಳುವ ನಿರೀಕ್ಷೆಯಿದೆ.
ಸುಮಾರು 6500 ಕಾರ್ಮಿಕರಲ್ಲಿ 850 ಕಾರ್ಮಿಕರು ಈಗಾಗಲೇ ತೆರಳಿದ್ದಾರೆ. ಮತ್ತೆ 1250 ಮಂದಿ ಊರಿಗೆ ಹೋಗಲು ಕಾಯುತ್ತಿದ್ದಾರೆ. ಅವರು ಕೆಲಸಕ್ಕೆ ಬರುತ್ತಿಲ್ಲ. ಈಗಾಗಲೇ ಹೋಗಿರುವವರ ಪೈಕಿಯಲ್ಲಿ ಶೇಕಡಾ 75 ರಷ್ಟು ಜನರು ಹಿಂತಿರುಗಿ ಕೆಲಸ ಮಾಡಲು ಬಯಸಿದ್ದಾರೆ ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಅಸಂಖ್ಯಾತ ವಲಸಿಗರು ತಮ್ಮೂರಿನತ್ತ ಮುಖ ಮಾಡುವುದರಿಂದ ಆಗುವ ಪರಿಣಾಮ ಕುರಿತಂತೆ ಮುಂಚಿತವಾಗಿಯೇ ನಿರೀಕ್ಷಿಸಲಾಗಿತ್ತು ಆಗಸ್ಟ್ 15 ಹಾಗೂ ನವೆಂಬರ್ 1ಕ್ಕೆ ಮುಗಿಯಬೇಕಾಗಿದ್ದ ಮೊದಲ ಹಂತದ ಮೈಸೂರು ರಸ್ತೆ ಹಾಗೂ ಕನಕಪುರ ರಸ್ತೆ ವಿಸ್ತರಣೆಯ ಮಾರ್ಗಗಳು ಸದ್ಯಕ್ಕೆ ಕುಂಠಿತವಾಗಿವೆ. ಆದರೆ ಈ ವರ್ಷವೇ ಸಿದ್ಧಗೊಳ್ಳುವ ವಿಶ್ವಾಸವಿದೆ ಎಂದರು.
ಈ ಮಧ್ಯೆ, ನಾಗಾವಾರ ಮತ್ತು ಗೊಟ್ಟಿಗೆಹಾರ ನಡುವಿನ ಸುರಂಗ ಕೊರೆಯುವ ಕಾರ್ಯವನ್ನು ಇನ್ನೂ ಕೈಗೆತ್ತಿಕೊಂಡಿಲ್ಲ. ಸುರಂಗ ಕೊರೆಯುವ ನಾಲ್ಕು ಟನಲ್ ಬೋರಿಂಗ್ ಮೆಷಿನ್ ಗಳನ್ನು (ಟಿಬಿಎಂ) ಚೀನಾದಿಂದ ತರಿಸಿಕೊಳ್ಳಲಾಗುತ್ತಿದೆ. ಈ ಪೈಕಿ ಒಂದನ್ನು ಶಿವಾಜಿನಗರದ ಮೆಟ್ರೋ ನಿಲ್ದಾಣದ ಬಳಿ ನಿಯೋಜಿಸಲಾಗುವುದು, ಇನ್ನೂ ಉಳಿದವುಗಳನ್ನು ಎಲ್ಲಿ ನಿಯೋಜಿಸಬೇಕು ಎಂಬುದರ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಅವರು ತಿಳಿಸಿದರು.
ಟಿಬಿಎಂಗಳನ್ನು ನಿರ್ವಹಿಸುವ ಪರಿಣಿತ ಸಿಬ್ಬಂದಿಯಲ್ಲಿ ಕೆಲವರು ಬೆಂಗಳೂರು ತೊರೆದಿದ್ದು, ಅವರ ಬರುವಿಕೆಗಾಗಿ ಕಾಯಲಾಗುತ್ತಿದೆ. ಇಲ್ಲದಿದ್ದರೆ ಗುತ್ತಿಗೆದಾರರು ಇತರ ಕಾರ್ಮಿಕರ ಕೈಯಲ್ಲಿ ಆ ಕೆಲಸ ಮಾಡಿಸಬೇಕಾಗಿದೆ. ಇದು ನಮ್ಮ ಕೆಲಸದ ಮೇಲೆ ಹೊಡೆತ ಬಿದ್ದಿದೆ ಎಂದು ಅಜಯ್ ಸೇಠ್ ಹೇಳಿದರು.
ಏಪ್ರಿಲ್ 23ರ ನಂತರ ಒಂದು ವಾರದ ಮಟ್ಟಿಗೆ ಮೆಟ್ರೋ ಕಾಮಗಾರಿ ನಡೆಸಲು ಸರ್ಕಾರ ಅನುಮತಿ ನೀಡಿತ್ತು. ಆದರೆ, ತದನಂತರ ಅದನ್ನು ನಿಲ್ಲಿಸಲಾಯಿತು. ಆರಂಭದಲ್ಲಿ ಕೆಲವರು ಮಾತ್ರ ತಮ್ಮೂರಿಗೆ ಹೋಗಲು ಬಯಸಿದ್ದರು. ಆದರೆ, ಆಮೇಲೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳಿದ್ದರಿಂದ ವಿಳಂಭವಾಗಿದೆ ಎಂದು ಮತ್ತೋರ್ವ ಅಧಿಕಾರಿ ತಿಳಿಸಿದರು.
ವಲಸೆ ಕಾರ್ಮಿಕರ ಕಾರಣದಿಂದಾಗಿ ನಿಗದಿಪಡಿಸಲಾಗಿದ್ದ ಅವಧಿಯಲ್ಲಿ ಕಾಮಗಾರಿ ಮುಗಿಯಲು ಸಾಧ್ಯವಿಲ್ಲ, ಇನ್ನೊಂದಿಷ್ಟು ದಿನಗಳ ಕಾಲ ವಿಳಂಬವಾಗಲಿದೆ ಎಂದು ಮುಖ್ಯ ಎಂಜಿನಿಯರ್ ಬಿಎಲ್ ಯಶವಂತ್ ಚವ್ಹಾಣ್ ತಿಳಿಸಿದ್ದಾರೆ.
Advertisement