ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾನುವಾರ ಮಧ್ಯಾಹ್ನ ಒಂದು ಗಂಟೆಗೂ ಅಧಿಕ ಕಾಲ ಸುರಿದ ಧಾರಾಕಾರ ಬಿರುಗಾಳಿ ಮಳೆಗೆ ಬರೋಬ್ಬರಿ 150ಕ್ಕೂ ಹೆಚ್ಚು ಮರಗಳು ಹಾಗೂ ಮರದ ಕೊಂಬೆಗಳು, ವಿದ್ಯುತ್ ಕಂಬಗಳು ಧರೆಗುರುಳಿಸಿದ್ದು, ಲಾಕ್'ಡೌನ್ ಪರಿಣಾಮ ಭಾರೀ ಅನಾಹುತಗಳು ತಪ್ಪಿದಂತಾಗಿದೆ.
ನಗರದ ವಿವಿಧೆಡೆ ನಾಲ್ಕೈದು ವಾಹನಗಳು ಹಾಗೂ ಮನೆಗಳಿಗೆ ಹಾನಿಯುಂಟಾಗಿರುವ ಬಗ್ಗೆ ಕೂಡ ವರದಿಯಾಗಿದ್ದು, ಅದೃಷ್ಟವಶಾತ್ ಲಾಕ್'ಡೌನ್ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಹಾನಿಗಳಾಗಿಲ್ಲ
.
ಅರಬ್ಬಿ ಸಮುದ್ರದ ಕರಾವಳಿ ಭಾಗದಲ್ಲಿನ ಮೇಲ್ಮೈ ಸುಳಿಗಾಳಿ ಹಾಗೂ ಬಿಸಿಲಿನ ತಾಪಮಾನ ಹೆಚ್ಚಳವಾದ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಭಾನುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಭಾರೀ ಬಿಸಿಲು ಇತ್ತಾದರೂ ಮಧ್ಯಾಹ್ನ 2.30ರ ಸುಮಾರಿಗೆ ಭಾರಿ ಗಾಳಿಯೊಂದಿಗೆ ಮಳೆ ಸುರಿಯಲಾರಂಭಿಸಿತ್ತು. ಸುಮಾರು ಒಂದು ತಾಸಿಗೂ ಅಧಿಕ ಕಾಲ ಸುರಿದ ಬಿರುಗಾಳಿ ಸಹಿತ ಮಳೆಗೆ 150ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಮರ ಬಿದ್ದ ಪರಿಣಾಮ ನಾಲ್ಕೈದು ವಿದ್ಯುತ್ ಕಂಬ ಧರೆಗುರುಳಿವೆ. ಕೆಲವು ಕಡೆಯಂತೆ 2 ತಾಸಿಗೂ ಅಧಿಕ ಕಾಲ ವಿದ್ಯುತ್ ವ್ಯತ್ಯಯಗಳು ಉಂಟಾಗಿದ್ದು ಕಂಡು ಬಂದಿತ್ತು.
ಜೆಪಿ ನಗರದ ಮೊದಲ ಹಂತದಲ್ಲಿ ಮೂರು ಮರಗಳು ಧರೆಗುರುಳಿದ್ದು, ಎರಡು ಕಾರುಗಳು ಜಖಂಗೊಂಡಿವೆ. ಜಯನಗರ ಸ್ಕೂಲ್ ಪಾಯಿಂಟ್ ಬಳಿ ವಿದ್ಯುತ್ ಕಂಬ ನೆಲಕ್ಕೆ ಉರುಳಿ ಎರಡು ಕಾರುಗಳು ಜಖಂಗೊಂಡಿವೆ. ನಗರದ ಪ್ರಮುಖ ಜಂಕ್ಷನ್ ಗಳು, ರಸ್ತೆಗಳಲ್ಲಿ ನೀರು ನಿಂತುಕೊಂಡಿತ್ತು. ಭಾನುವಾರದ ಲಾಕ್'ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಅಲ್ಲಿ ಅಷ್ಟೊಂದು ಸಂಚಾರ ಇಲ್ಲದ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ. ಸಾರ್ವಜನಿಕರು ಕೂಡ ತೊಂದರೆಗೆ ಒಳಗಾಗಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement