ವಿಜಯಪುರ: ಇಡೀ ಉತ್ತರ ಕರ್ನಾಟಕ ಬಿಸಿಲ ಬೇಗೆಯಿಂದ ತತ್ತರಿಸಿರುತ್ತಿದೆ. ವಿಜಯಪುರದಲ್ಲಿ ಅತ್ಯಧಿಕ ಅಂದರೆ 45.3 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ಈ ಹಿಂದೆ ವಿಜಯಪುರದಲ್ಲಿ ಅಧಿಕ ಎಂದರೇ 42.3ಡಿಗ್ರಿಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು.
ಪಶ್ಚಿಮ ಬಂಗಾಳ, ಒಡಿಸಾದಲ್ಲಿ ಅಂಫಾನ್ ಚಂಡಮಾರುತದಿಂದಾಗಿ ಭೂ ಕುಸಿತ ಉಂಟಾಗುತ್ತಿದೆ, ಆದರೆ ಕರ್ನಾಟಕದಲ್ಲಿ ಹೆಚ್ಚಿ ನ ತಾಪಮಾನದಿಂದ ಜನ ತತ್ತರಿಸುತ್ತಿದ್ದಾರೆ. ಮೇ 28ರವರೆಗೆ ಚಿತ್ರದುರ್ಗ, ತುಮಕೂರು, ಕೋಲಾರ ಮತ್ತು ಚಿಕ್ಕಬಳ್ಳಾಪುರದಲ್ಲಿ ಅತ್ಯಧಿಕ ತಾಪಮಾನ ದಾಖಲಾಗಲಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಸೂಚನೆ ನೀಡಿದೆ.
ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಷ್ಟೊಂದು ಗರಿಷ್ಟ ಪ್ರಮಾಣದ ಉಷ್ಣಹವೆ ಏರುತ್ತಿದೆ, ಈ ಹಿಂದೆ ನಮಗೆ ಗರಿಷ್ಠ ಉಷ್ಣಾಂಶದ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು, ಆದರೆ ಇದೇ ಮೊದಲ ಬಾರಿಗೆ ಇಷ್ಟೊಂದು ಉಷ್ಣಹವೆ ದಾಖಲಾಗಿದೆ, ಇದರಿಂದ ಮುಂಗಾರು ಮಳೆ ಮೇಲೆ ಪ್ರಭಾವ ಉಂಟಾಗಲಿದೆ ಎಂದು ಹೇಳಲಾಗುತ್ತಿದೆ.
ತಾಪಮಾನ ಏರಿಕೆಗೆ ಹಲವು ಕಾರಣಗಳಿವೆ ಕಳೆದ ಹದಿನೈದು ದಿನದಿಂದ ಈ ಪ್ರದೇಶದಲ್ಲಿ ಯಾವುದೇ ಮಳೆಯಾಗದ ಕಾರಣ, ವಾತಾವರಣದ ಉಷ್ಣತೆಯು ಹೆಚ್ಚಾಗುತ್ತಲೇ ಇದೆ ಮತ್ತು ತಾಪಮಾನ ಏರಿಕೆಯಿಂದಾಗಿ ಈ ಪ್ರದೇಶದ ವಾತಾವರಣದಲ್ಲಿ ಕಡಿಮೆ ಒತ್ತಡ ಹೆಚ್ಚಾಗುತ್ತದೆ ಎಂದು ಬೆಂಗಳೂರು ಕೃಷಿ ವಿವಿ ಮಾಜಿ ರಿಜಿಸ್ಟ್ರಾರ್ ಡಾ. ಎಂಬಿ ರಾಜೇಗೌಡ ಹೇಳಿದ್ದಾರೆ.
ವಾತಾವರಣದಲ್ಲಿರುವ ತೇವಾಂಶವನ್ನು ಚಂಡಮಾರುತ ಎಳೆದೊಯ್ಯುವುದರಿಂದ ಒಣಹವೆ ಉಂಟಾಗುತ್ತದೆ. ಈ ಒಣಗಾಳಿಗೆ ಸೂರ್ಯನ ಕಿರಣಗಳು ಸೇರಿದಾಗ ಇಡೀ ವಾತಾವರಣವೇ ಬಿಸಿಯಾಗಿ ಉಷ್ಣ ಹವೆ ಉಂಟಾಗುತ್ತದೆ ಎಂದು ಹೇಳಿದ್ದಾರೆ.
ಇನ್ನೂ ಕೃಷಿ ಚಟುವಟಿಕೆ ಶೂನ್ಯವಾಗಿರುವ ಕಾರಣ ಭೂಮಿ ಒಣಗುತ್ತಿದೆ, ಕಳೆದ ಎರಡು ದಶಕಗಳಲ್ಲಿ ಇದೇ ಮೊದಲ ಬಾರಿ ಇಷ್ಟೊಂದು ತಾಪಮಾನ ಏರುತ್ತಿರುವುದು ಎಂದು ಕೃಷಿ ವಿಜ್ಞಾನಿ ಡಾ. ವೆಂಕಟೇಶ್ ಹೇಳಿದ್ದಾರೆ. ಮುಂಗಾರು ಸಮೀಪಿಸುತ್ತಿದೆ, ಇಂತಹ ಸಮಯದಲ್ಲಿ ಉಷ್ಣಾಂಶ 40 ಡಿಗ್ರಿ ತಲುಪುತ್ತಿದೆ, ಇದರಿಂದ ಮುಂಗಾರು ಮಳೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
Advertisement