ಸಕ್ಕರೆ ನಗರಿಗೆ ಸಿಹಿ ಸುದ್ದಿ: ಮಳವಳ್ಳಿ, ಮಂಡ್ಯ ನಗರ ಕೊರೋನಾ ಮುಕ್ತ!

ಕೆಆರ್ ಪೇಟೆ ಮತ್ತು ನಾಗಮಂಗಲದಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳದ ನಡುವೆಯೂ ಸಕ್ಕರೆ ನಗರಿ ಮಂಡ್ಯ ಜಿಲ್ಲೆಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.
ಮಂಡ್ಯ ಪ್ರವೇಶ ದ್ವಾರ
ಮಂಡ್ಯ ಪ್ರವೇಶ ದ್ವಾರ

ಮಂಡ್ಯ: ಕೆಆರ್ ಪೇಟೆ ಮತ್ತು ನಾಗಮಂಗಲದಲ್ಲಿ ಕೊರೋನಾ ಪ್ರಕರಣಗಳ ಹೆಚ್ಚಳದ ನಡುವೆಯೂ ಸಕ್ಕರೆ ನಗರಿ ಮಂಡ್ಯ ಜಿಲ್ಲೆಗೆ ಸಿಹಿ ಸುದ್ದಿಯೊಂದು ಹೊರಬಿದ್ದಿದೆ.

ಜುಬಿಲಿಯಂಟ್ ಸಂಪರ್ಕದಿಂದ ಆತಂಕ ಸೃಷ್ಠಿಸಿದ್ದ ಮಂಡ್ಯ ನಗರ ಮತ್ತು ತಬ್ಲಿಘೀ ನಂಟಿನಿಂದಾಗಿ ನಲುಗಿದ್ದ ಮಳವಳ್ಳಿ ಇದೀಗ ಕೊರೋನಾ ಮುಕ್ತ ಪಟ್ಟಣ ಎನ್ನಿಸಿಕೊಂಡಿದ್ದು ಇದರ ನಡುವೆ ಇಂದು ಯಾವುದೇ ಹೊಸ  ಪ್ರಕರಣ ಪತ್ತೆಯಾಗಿಲ್ಲದಿರುವುದು ಸಕ್ಕರೆನಾಡಿಗೆ ತುಸು ನೆಮ್ಮದಿ ತಂದಿದೆ.

ಇಡೀ ಮಂಡ್ಯ ಜಿಲ್ಲೆಯಲ್ಲಿಯೇ ಮೊಟ್ಟಮೊದಲ ಬಾರಿಗೆ ಏ.೭ ರಂದು ಕೊರೋನಾ ಪ್ರಕರಣ ಕಾಣಿಸಿಕೊಳ್ಳುವ ಮೂಲಕ ಮಳವಳ್ಳಿ ಪಟ್ಟಣ ಇಡೀ ಜಿಲ್ಲೆಯಲ್ಲಿ ಆತಂಕ ಮೂಡಿಸಿತ್ತು. ಸುಮಾರು ೨೨ ಜನರಿಗೆ ಕೊರೋನಾ ಸೋಂಕು ತಗುಲಿತ್ತಾದರೂ ಇದೀಗ ಅಷ್ಟೇ ವೇಗವಾಗಿ ಸೋಂಕಿತರೆಲ್ಲರು ಗುಣಮುಖರಾಗುವ ಮೂಲಕ ಇದೀಗ ಮಳವಳ್ಳಿ ಪಟ್ಟಣ ಕೊರೋನಾ ಮುಕ್ತವಾಗಿದೆ.

ದೆಹಲಿಯಿಂದ ಬಂದಿದ್ದ ತಬ್ಲಿಘಿ ಜಮಾತ್ ಸದಸ್ಯರಿಂದ ಮಳವಳ್ಳಿ ಪಟ್ಟಣಕ್ಕೆ ಅಂಟಿದ್ದ ಕೊರೋನಾ ಸೋಂಕು ಪ್ರತಿದಿನ ಏರಿಕೆಯಾಗುತ್ತಾ ಬರೋಬ್ಬರಿ ೨೨ ಜನರಿಗೆ ಸೋಂಕು ಹರಡುವ ಮೂಲಕ ಕೊರೋನಾ ಅಟ್ಟಹಾಸ ಮೆರೆದಿತ್ತು. ಇಡೀ ಜಿಲ್ಲೆಯಲ್ಲಿಯೇ ಮಳವಳ್ಳಿ ಪಟ್ಟಣ ಹಾಟ್ ಸ್ಪಾಟ್ ಆಗಿ ರೆಡ್ ಝೋನ್ ವಲಯಕ್ಕೆ ಸೇರಿಕೊಂಡಿತ್ತು.

ಸೋಂಕು ಪತ್ತೆಯಾಗುತ್ತಿದ್ದಂತೆಯೇ ಮಳವಳ್ಳಿ ಪಟ್ಟಣವನ್ನು ಲಾಕ್ ಡೌನ್  ಮತ್ತು ಸೀಲ್ಡೌನ್ ಹಾಗೂ ಕಂಟೋನ್ಮೆಂಟ್ ಪ್ರದೇಶವನ್ನಾಗಿ ಜಿಲ್ಲಾಡಳಿತ ಘೋಷಣೆ ಮಾಡಿತ್ತು. ಸೋಂಕಿತರ ಪ್ರಾಥಮಿಕ ಮತ್ತು ಸೆಕೆಂಡರಿ ಕಾಂಟ್ಯಾಕ್ಟ್ ಗಳನ್ನು ಗುರುತಿಸಿ ಕ್ವಾರೆಂಟೈನ್ ಮಾಡಿ ಸೋಂಕಿತರಿಗೆ ಉತ್ತಮ ಚಿಕಿತ್ಸೆಯನ್ನು ನೀಡುವ  ವ್ಯವಸ್ಥೆ ಮಾಡಲಾಗಿತ್ತು. ಸುದೈವವಶಾತ್ ಸೋಂಕಿತರೆಲ್ಲಾ ಬೇಗನೆ ಗುಣಮುಖರಾಗಿದ್ದಾರೆ, ಐಸೋಲೇಷನ್ ಚಿಕಿತ್ಸೆ ಪಡೆಯುತ್ತಿದ್ದ ೨೨ ಮಂದಿಯನ್ನೂ ಸಹ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. 

ಮಂಡ್ಯ ನಗರ ಕೊರೋನಾ ಮುಕ್ತ: ಇನ್ನೂ ಜಿಲ್ಲಾ ಕೇಂದ್ರ ಮಂಡ್ಯ ನಗರವೂ ಸಹ ಕೊರೊನಾ ಮುಕ್ತವಾಗಿದೆ. ಜುಬಿಲಿಯಂಟ್ ಸಂಪರ್ಕದಿಂದ ಪತ್ತೆಯಾಗಿದ್ದ ೨ ಪ್ರಕರಣಗಳು ಸಹ ಗುಣಮುಖರಾಗಿದ್ದು ಇದರೊಂದಿಗೆ ಮಂಡ್ಯ ಸಿಟಿಯ ಜನ ನಿಟ್ಟುಸಿರು ಬಿಡುವಂತಾಗಿದೆ.

ನಂಜನಗೂಡು ಜುಬಿಲಿಯಂಟ್ ಕಾರ್ಖಾನೆಯ ನೌಕರರಾದ ಸ್ವರ್ಣಸಂದ್ರ ಬಡಾವಣೆಯ ಯುವಕ ಮತ್ತು ಪೇಟೆಬೀದಿಯ ಮತ್ತೊಬ್ಬ ಯುವಕನಿಗೆ  ಸೊಂಕು ಕಾಣಿಸಿಕೊಂಡು ಇಡೀ ಮಂಡ್ಯ ನಗರ ಭೀತಿಯಲ್ಲಿ ಕಾಲಕಳೆಯುವಂತೆ ಮಾಡಿತ್ತು.
ಜಿಲ್ಲೆಯ ಪ್ರಮುಖ ವ್ಯಾಪಾರ ವ್ಯವಹಾರ ಕೇಂದ್ರವಾದ ಪೇಟೆ ಬಿದಿಯಂತು ಸೋಂಕು ಕಾಣಿಸಿಕೊಂಡು ಲಾಕ್ಡೌನ್, ಸೀಲ್ಡೌನ್, ಕಂಟೋನ್ಮೆಂಟ್ ಜೋನ್ಗೆ ಒಳಗಾದಾಗ ಇಡೀ ಮಂಡ್ಯವೇ ಸ್ಥಬ್ದವಾದಂತಾಗಿತ್ತು. ಜಿಲ್ಲಾಡಳಿತದ ಸೂಕ್ತ ಮುಂಜಾಗೃತಾ ಕ್ರಮಗಳಿಂದಾಗಿ ಮಂಡ್ಯ ನಗರದಲ್ಲಿ ಇದ್ದ ಎರಡೂ ಪ್ರಕರಣಗಳೂ ಸಹ ಗುಣಮುಖವಾಗಿದ್ದು ಮಂಡ್ಯ ಸಿಟಿಯ ಜನ ನೆಮ್ಮದಿಯಿಂದ ನಿದ್ದೆ ಮಾಡುವಂತಾಗಿದೆ.

ಇಂದಿನ ಹೆಲ್ತ್ ಬುಲೇಟಿನ್ ಪ್ರಕಾರ ಮಂಡ್ಯದಲ್ಲಿ ಯಾವುದೇ ಕೊರೋನಾ ಪ್ರಕರಣ ದಾಖಲಾಗಿಲ್ಲ, ಈವರೆಗೆ ೨೭ ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದು ೨೨೭ ಪ್ರಕರಣ ಸಕ್ರಿಯವಾಗಿವೆ.

ಮಳವಳ್ಳಿ ಮತ್ತು ಮಂಡ್ಯನಗರ ಕೊರೋನಾ ಮಾರಿಯಿಂದ ಮುಕ್ತವಾಗಿದ್ದರೂ ದುರಾದೃಷ್ಠವೆಂಬಂತೆ ಕೆ.ಆರ್.ಪೇಟೆ, ನಾಗಮಂಗಲ ಹಾಗೂ ಪಾಂಡವಪುರವನ್ನು ಮಾತ್ರ ಬಿಟ್ಟುಬಿಡದಂತೆ ಕಾಡುತ್ತಿದೆ.

ರದಿ: ನಾಗಯ್ಯ 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com