ಬೆಂಗಳೂರು: ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಮರ ಬಿದ್ದು ಯುವತಿ ಸೇರಿ 2 ಮಹಿಳೆಯರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಬೆಂಗಳೂರಿನ ಬೇಗೂರು ಬಳಿ ಈ ದುರಂತ ಸಂಭವಿಸಿದ್ದು, ಸ್ಕೂಟಿಯಲ್ಲಿ ಹೋಗುತ್ತಿದ್ದ ಮಹಿಳೆಯ ಮೇಲೆ ಮರದ ರೆಂಬೆ ಮುರಿದುಬಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿದ್ದಾರೆ. ಬೊಮ್ಮನಹಳ್ಳಿಯ ಬೇಗೂರಿನಲ್ಲಿ ಮಳೆಯಿಂದ ಪಾರಾಗಲು 45 ವರ್ಷದ ಹೇಮಾ ಎಂಬ ಮಹಿಳೆ ಸ್ಕೂಟಿಯಲ್ಲಿ ಮನೆಯತ್ತ ಹೋಗುತ್ತಿದ್ದರು. ಈ ವೇಳೆ ರಭಸವಾಗಿ ಬೀಸಿದ ಗಾಳಿಯಿಂದ ಮರ ಕೆಳಗೆ ಉರುಳಿದ್ದು, ಅದರ ರೆಂಬೆಗಳು ಹೇಮಾ ಅವರ ಸ್ಕೂಟಿಯ ಮೇಲೆ ಬಿದ್ದಿವೆ. ರೆಂಬೆಗಳ ಅಡಿಯಲ್ಲಿ ಸಿಲುಕಿದ ಹೇಮಾ ಅವರನ್ನು ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದರೂ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಂತೆಯೇ ಬೆಂಗಳೂರಿನ ಲಕ್ಷ್ಮೀದೇವಿ ನಗರದಲ್ಲಿ ನಿರ್ಮಾಣ ಹಂತದ ಕಟ್ಟಡದ ಮೇಲಿಂದ ಇಟ್ಟಿಗೆ ಕಲ್ಲು ಕೆಳಗೆ ಬಿದ್ದು 22 ವರ್ಷದ ಶಿಲ್ಪಾ ಎಂಬ ಯುವತಿ ಸಾವನ್ನಪ್ಪಿದ್ದಾರೆ. ಮನೆಯಲ್ಲೇ ಆಫೀಸ್ ಕೆಲಸ ಮಾಡುತ್ತಿದ್ದಾಗ ಮನೆ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲಿಂದ ಇಟ್ಟಿಗೆ ತಲೆ ಮೇಲೆ ಬಿದ್ದಿತ್ತು. ಘಟನೆ ನಡೆದ ತಕ್ಷಣ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾರೆ.
Advertisement