ಕೊರೋನಾ ಎಫೆಕ್ಟ್: ರಾಜ್ಯದಲ್ಲಿ 1,552 ಮಂದಿ ಕೈದಿಗಳ ಬಿಡುಗಡೆ
ಬೆಂಗಳೂರು: ಕೊರೋನಾ ಸೋಂಕು ಹಬ್ಬುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನದಂತೆ ಮಾರ್ಚ್ ಅಂತ್ಯದವರೆಗೂ 1,552 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಬಂಧಿಖಾನೆ ಎಡಿಜಿಪಿ ಅಲೋಕ್ ಮೋಹನ್ ಅವರು ಹೇಳಿದ್ದಾರೆ.
ಕೊರೋನಾ ಹಿನ್ನೆಲೆಯಲ್ಲಿ ಈ ವರೆಗೂ 1,552 ಮಂದಿಯನ್ನು ಬಿಡುಗಡೆ ಮಾಡಲಾಗಿದ್ದು, ಇನ್ನೂ 1,134 ಕೈದಿಗಳ ಪ್ರಕರಣ ವಿಚಾರಣಾ ಹಂತದಲ್ಲಿದೆ, 418 ಮಂದಿ ಅಪರಾಧಿಗಳಿದ್ದಾರೆ. ಪ್ರಸುತ ರಾಜ್ಯದಲ್ಲಿರುವ ಎಲ್ಲಾ ಕಾರಾಗೃಹಗಳಲ್ಲಿ ಒಟ್ಟಾರೆ 15,000 ಮಂದಿ ಕೈದಿಗಳಿದ್ದಾರೆಂದು ಮಾಹಿತಿ ನೀಡಿದ್ದಾರೆ.
ಮಾರ್ಚ್ 23 ರಂದು ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ನೀಡಿದ್ದ ಸುಪ್ರೀಂಕೋರ್ಟ್, ಕೊರೋನಾ ಹಿನ್ನೆಲೆಯಲ್ಲಿ ವಿಚಾರಣಾ ಹಂತದಲ್ಲಿರುವ ಕೈದಿಗಳು, 7 ವರ್ಷಗಳಿಂಗಿಂತಲೂ ಕಡಿಮೆ ಶಿಕ್ಷೆ ಪಡೆದಿರುವವರುವ ಕೈದಿಗಳನ್ನು ದಂಡದೊಂದಿಗೆ ಬಿಡುಗಡೆಗೊಳಿಸುವಂತೆ ಸೂಚನೆ ನೀಡಿತ್ತು. ಅಲ್ಲದೆ, ಈ ಕುರಿತು ಉನ್ನತ ಸಮಿತಿ ರಚನೆ ಮಾಡಿ ಕೈದಿಗಳ ಬಿಡುಗಡೆ ಪರಿಶೀಲನೆ ನಡೆಸಲು ಅವಕಾಶ ನೀಡಬೇಕೆಂದು ತಿಳಿಸಿತ್ತು.