ಬೆಂಗಳೂರು: ಕ್ಷುಲ್ಲಕ ವಿಚಾರಕ್ಕೆ ಯುವಕನೊಬ್ಬನನ್ನು ಚಾಕುವಿನಿಂದ ಚುಚ್ಚಿ ಬರ್ಬರ ಹತ್ಯೆ ಮಾಡಿರುವ ಘಟನೆ ಬೆಂಗಳುರಿನ ಕೆಜಿ ಹಳ್ಳಿಯಲ್ಲಿ ನಡೆದಿದೆ.
ಅಸ್ಕರ್(20) ಕೊಲೆಯಾದ ಯುವಕನಾಗಿದ್ದು ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ದುಷ್ಕರ್ಮಿಗಳು ಈತನನ್ನು ಅಡ್ಡಗಟ್ಟಿ ಹತ್ಯೆ ಮಾಡಿದ್ದಾರೆ.
ತಬ್ರೇಜ್ ಹಾಗೂ ಸಮೀರ್ ಎನ್ನುವವರಿದ್ದ ಗ್ಯಾಂಗ್ ಈ ಕೃತ್ಯ ಎಸಗಿದ್ದು ಜೀವನ್ಮರಣದ ನಡುವೆ ಹೋರಾಡುತ್ತಿದ್ದ ಅಸ್ಕರ್ ನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಿಸದೆ ಅಸುನೀಗಿದ್ದಾನೆ.
ಇನ್ನು ಆರೋಪಿ ತಬ್ರೇಜ್ಹಾಗೂ ಕೊಲೆಯಾದ ಅಸ್ಕರ್ನಡುವೆ ಮೂರು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿದ್ದು ಆ ಸಮಯ ತಬ್ರೇಜ್ ಕೊಲೆಯಾದ ಅಸ್ಕರ್ ಕಪಾಳಕ್ಕೆ ಹೊಡೆದಿದ್ದ. ಆ ಸಮಯ ಅಸ್ಕರ್ ತಾನು ತಬ್ರೇಜ್ ನನ್ನು ಕೊಲೆ ಮಾಡುವುದಾಗಿ ಕೆಲವರ ಬಳಿ ಹೇಳಿದ್ದನೆನ್ನಲಾಗಿದೆ. ಇದರಿಂದ ಭೀತಿಗೊಂಡ ತಬ್ರೇಜ್ ತನ್ನ ಸ್ನೇಹಿತರೊಡನೆ ಸೇರಿ ಅಸ್ಕರ್ ಮೇಲೆ ಬಿದ್ದು ಹತ್ಯೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಘಟನೆ ಸಂಬಂಧ ಕೆ.ಜಿ.ಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತಪ್ಪಿಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ನಡೆದಿದೆ.
Advertisement