ಬೆಂಗಳೂರು: ಶಾಲೆ ಪುನರಾರಂಭ ಕುರಿತು ತರಾತುರಿಯ ನಿರ್ಧಾರ ಕೈಗೊಳ್ಳುವುದಿಲ್ಲ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ನಾಲ್ಕೈದು ದಿನಗಳಲ್ಲಿ ಮಾತುಕತೆ ನಡೆಸಲಾಗುವುದು. ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಕೊರೋನಾ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆದ ಬಳಿಕ ಕೆಲ ದಿನಗಳಿಂದ ಕ್ವಾರಂಟೈನ್ ನಲ್ಲಿದ್ದ ಸುರೇಶ್ ಕುಮಾರ್ ಅವರು, ನಿನ್ನೆಯಷ್ಟೇ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕರೊಂದಿಗೆ ಸಬೆ ನಡೆಸಿ ಮಾತುಕತೆ ನಡೆಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಶಾಲೆ, ಪಿಯು ಕಾಲೇಜು ಆರಂಭ ಬಗ್ಗೆ ತರಾತುರಿ ಮಾಡದೆ, ಸಂಬಂಧಿಸಿದ ಎಲ್ಲರ ಅಭಿಪ್ರಾಯ ಸಂಗ್ರಹಿಸಿ, ಶಾಲೆ ಆರಂಭಿಸಿರುವ ರಾಜ್ಯಗಳಲ್ಲಿನ ಪರಿಣಾಮ ಅವಲೋಕಿಸಿ ನಿರ್ಧರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಮಕ್ಕಳ ಹಕ್ಕು ಮತ್ತು ಅವರ ಆರೋಗ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಆದರೂ, ವಿದ್ಯಾರ್ಥಿಗಳನ್ನು ದೀರ್ಘಕಾಲದವರೆಗೆ ಕಲಿಕೆಯ ಪ್ರಕ್ರಿಯೆಗಳಿಂದ ದೂರವಿಡದಿರುವ ಬಗ್ಗೆ ಯೋಚಿಸುವುದು ಸಹ ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
"ಮಕ್ಕಳ ಹಕ್ಕುಗಳು, ಕಲ್ಯಾಣ, ಪೋಷಕರ ಭೀತಿ, ಶಿಕ್ಷಕರ ಹಕ್ಕುಗಳು ಎಲ್ಲವೂ ನಮಗೆ ಮುಖ್ಯವಾಗಿದೆ, ಆದ್ದರಿಂದ ಶಾಲೆಗಳನ್ನು ಪುನಃ ತೆರೆಯುವ ಬಗ್ಗೆ ಸರ್ಕಾರ ಯಾವುದೇ ಆತುರದ ನಿರ್ಧಾರವನ್ನು ತೆಗೆದುಕೊಂಡಿಲ್ಲ" ಎಂದಿದ್ದಾರೆ.
ಶಾಲೆಗಳನ್ನು ಪುನರಾರಂಭಿಸುವ ಕುರಿತು ಈಗಾಗಲೇ ಸುರೇಶ್ ಕುಮಾರ್ ಅವರು, ಹಲವಾರು ಚರ್ಚೆಗಳನ್ನು ನಡೆಸಿದ್ದಾರೆ, ಆದರೆ ಇದುವರೆಗೂ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ಇನ್ನು ಕೆಲವೇ ದಿನಗಳಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಲಿರುವ ಸುರೇಶ್ ಕುಮಾರ್ ಅವರು ನಂತರ ಅಂತಿನ ನಿರ್ಧಾರ ಕೈಗೊಳ್ಳಲಿದ್ದಾರೆಂದು ತಿಳಿದುಬಂದಿದೆ.
ಮುಂದಿನ ಎರಡು ದಿನಗಳಲ್ಲಿ ಸಾರ್ವಜನಿಕ ಶಿಕ್ಷಣ, ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಕಲ್ಯಾಣ, ಗ್ರಾಮೀಣಾಭಿವೃದ್ಧಿ, ಸಾರಿಗೆ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳು, ಶಾಲಾ ಅಭಿವೃದ್ಧಿ ಮತ್ತು ಮಾನಿಟರಿಂಗ್ ಸಮಿತಿಯ ಪ್ರತಿನಿಧಿಗಳು ಮತ್ತು ಶಿಕ್ಷಣ ತಜ್ಞರೊಂದಿಗೆ ಸುರೇಶ್ ಕುಮಾರ್ ಅವರು ಚರ್ಚೆಯನ್ನು ನಡೆಸಲಿದ್ದಾರೆಂದು ಹೇಳಲಾಗುತ್ತಿದ್ದು, ಈ ಸಭೆ ಬಳಿಕ ಶಾಲೆ ಪುನರಾರಂಬ ಕುರಿತು ಸಮಗ್ರ ವರದಿಯನ್ನು ಪ್ರಕಟಿಸಲಿದ್ದಾರೆಂದು ಹೇಳಲಾಗುತ್ತಿದೆ.
ಡಿಡಿಪಿಐ ಮತ್ತು ಬಿಇಒಗಳು ಈಗಾಗಲೇ ಪ್ರಾಥಮಿಕ ಹಂತದ ಚರ್ಚೆಗಳನ್ನು ನಡೆಸಿದ್ದು, ವರದಿಯನ್ನು ಶೀಘ್ರದಲ್ಲಿಯೇ ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದಾರೆ. ಬಳಿಕ ಸಚಿವರು ಈ ವರದಿಯನ್ನು ಮುಖ್ಯಮಂತ್ರಿಗೆ ಸಲ್ಲಿಸಲಿದ್ದು, ಬಳಿಕ ಮುಖ್ಯಮಂತ್ರಿಗಳ ನಿರ್ಧಾರದಂತೆ ಮುನ್ನಡೆಯಲಾಗುತ್ತದೆ ಎಂದು ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಅಕ್ಟೋಬರ್ 12 ರಿಂದ ಮೂರು ವಾರಗಳ ಮಧ್ಯಕಾಲೀನ ರಜಾದಿನಗಳನ್ನು ಘೋಷಿಸಿದ ನಂತರ ಸರ್ಕಾರವು ವಿದ್ಯಾಗಮ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಹಲವು ಶಾಲೆಗಳ ವ್ಯವಸ್ಥಾಪಕರು ಸಾಕಷ್ಟು ಮನವಿ ಮಾಡಿದ ಬಳಿಕವೂ ಸರ್ಕಾರ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡಿರಲಿಲ್ಲ.
Advertisement