ಗದಗ: ದುಸ್ತರ ರಸ್ತೆಗಳಿಂದ ಬೇಸತ್ತ ಗ್ರಾಮಸ್ಥರು ತಮ್ಮ ಊರಿನ ರಸ್ತೆಯ ಪರಿಸ್ಥಿತಿಯನ್ನು ತೋರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಂಜಿನೀಯರ್ ನನ್ನು ಟ್ರ್ಯಾಕ್ಟರ್ ನಲ್ಲಿ ಗ್ರಾಮಕ್ಕೆ ಕರೆತಂದಿದ್ದಾರೆ.
ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ದೊಡ್ಡೂರು ಗ್ರಾಮದ ಜನರು ಸುಮಾರು 2 ಕಿಮೀವರೆಗೆ ಎಂಜಿನೀಯರ್ ಅವರನ್ನು ಟ್ರ್ಯಾಕ್ಟರ್ ನಲ್ಲಿ ಕರೆ ತಂದಿದ್ದಾರೆ. ರಸ್ತೆ ಸರಿಪಡಿಸಬೇಕೆಂದು ಆಗ್ರಹಿಸಿ ದೊಡ್ಡೂರು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ರಾಜೇಶ್ ಪಾಟೀಲ್ ಸ್ಥಳಕ್ಕಾಗಮಿಸಿ ಪ್ರತಿಭಟನೆ ನಡೆಸುತ್ತಿದದ್ದವರ ಮನವೊಲಿಸಲು ಪ್ರಯತ್ನಿಸಿದರು, ಆದರೆ ಇದರಿಂದ ಸಮಾಧಾನಗೊಳ್ಳದ ಗ್ರಾಮಸ್ಥರು ತಮ್ಮೊಂದಿಗೆ ಟ್ರಾಕ್ಟರ್ ನಲ್ಲಿ ಕುಳಿತು ಬಂದು ರಸ್ತೆಯ ಸ್ಥಿತಿಯನ್ನು ವಾಸ್ತವವಾಗಿ ನೋಡುವಂತೆ ಕರೆತಂದಿದ್ದಾರೆ.
ತಿಂಗಳ ಹಿಂದೆ ಲಕ್ಷ್ಮೇಶ್ವರ-ದೊಡ್ಡೂರು ರಸ್ತೆ ರಿಪೇರಿ ಮಾಡಲಾಗಿತ್ತು, ಆದರೆ ಗುತ್ತಿಗೆದಾರರು ಸರಿಯಾದ ಕೆಲಸ ಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ದೊಡ್ಡೂರಿನಿಂದ ಲಕ್ಷ್ಮೇಶ್ವರವರೆಗಿನ ರಸ್ತೆ ಸದಾ ಬ್ಯುಸಿಯಾಗಿದ್ದು, ರೈತರು ತಮ್ಮ ಹೊಲ ಗದ್ದೆಗಳಿಗೆ ಎತ್ತಿನ ಗಾಡಿಯಲ್ಲಿ ಇದೇ ರಸ್ತೆ ಮೂಲಕ ಹೋಗುತ್ತಾರೆ, ಗ್ರಾಮಸ್ಥರು ಆಟೋದಲ್ಲಿ ಇದೇ ರಸ್ತೆ ಮೂಲಕ ಮಾರ್ಕೆಟ್ ಗೆ ತೆರಳುತ್ತಾರೆ.
ಈ ರಸ್ತೆಯಲ್ಲಿ ಹಲವು ಸಣ್ಣ ಪುಟ್ಟ ಅಪಘಾತಗಳು ಪ್ರತಿನಿತ್ಯ ನಡೆಯುತ್ತಿವೆ, ಕಳೆದ ವಾರ ಎತ್ತಿನ ಬಂಡಿ ಚಕ್ರವು ಮಣ್ಣಿನ ರಸ್ತೆಯಲ್ಲಿ ಸಿಲುಕಿಕೊಂಡ ಪರಿಣಾಮ ಒಂದು ಎತ್ತಿನ ಕಾಲು ಮುರಿದುಹೋಗಿದೆ, ಇದಾದ ನಂತರ ಹಲವು ಗ್ರಾಮಸ್ಥರು ರಸ್ತೆ ರಿಪೇರಿ ಮಾಡುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಗುತ್ತಿಗೆದಾರರ ತಪ್ಪಿನಿಂದ ರಸ್ತೆ ಹದಗೆಟ್ಟಿದೆ, ದೀಪಾವಳಿ ಹಬ್ಬದ ಒಳಗೆ ರಸ್ತೆ ರಿಪೇರಿ ಕೆಲಸ ಆರಂಭಿಸುವುದಾಗಿ ಎಂಜಿನೀಯರ್ ರಾಜೇಶ್ ಪಾಟೀಲ್ ತಿಳಿಸಿದ್ದಾರೆ.
Advertisement