ಬೆಂಗಳೂರು: ಕೈಯಲ್ಲಿ ತಲ್ವಾರ್ ಹಿಡಿದು ಹಾಡ ಹಗಲೇ ಅಂಗಡಿ ಮಾಲೀಕನೋರ್ವನನ್ನು ಹೆದರಿಸಿ ಸುಲಿಗೆ ಮಾಡಿದ್ದ ಆರೋಪಿಯನ್ನು ಬಾಣಸವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅರ್ಫಾಜ್ ಬಂಧಿತ ಆರೋಪಿಯಾಗಿದ್ದು, ಅ.22ರಂದು ಅರ್ಫಾಜ್, ಹಾಡಹಗಲೇ ಮಚ್ಚು ಹಿಡಿದು ನಗರದ ಹೆಣ್ಣೂರಿನ ಕಾಚರಕನಹಳ್ಳಿ ರಸ್ತೆಯಲ್ಲಿ ಮಳೆಗೆ ಅಂಗಡಿಗಳ ಪಕ್ಕದಲ್ಲಿ ಆಶ್ರಯ ಪಡೆದಿದ್ದ ಸಾರ್ವಜನಿಕರನ್ನು ಮಚ್ಚು ತೋರಿಸಿ ಹೆದರಿಸಿ, ಬೆದರಿಕೆ ಹಾಕಿದ್ದ. ಇದಾಗ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ಕಳೆದ ಅಕ್ಟೋಬರ್ 22ರಂದು ಬೆಂಗಳೂರು ನಗರದ ಹೆಣ್ಣೂರಿನ ಕಾಚರಕನಹಳ್ಳಿ ರಸ್ತೆಯಲ್ಲಿ ಮಳೆಗೆ ಅಂಗಡಿಗಳ ಪಕ್ಕದಲ್ಲಿ ಆಶ್ರಯ ಪಡೆದಿದ್ದ ಸಾರ್ವಜನಿಕರನ್ನು ವ್ಯಕ್ತಿ ಮಚ್ಚು ತೋರಿಸಿ ಹೆದರಿಸಿ, ಬೆದರಿಕೆ ಹಾಕಿದ್ದ. ನಂತರ ಮಾರಕಾಸ್ತ್ರ ಹಿಡಿದು ಅಂಗಡಿ ಮಾಲೀಕನನ್ನು ಹೆದರಿಸಿ ಹಣ ವಸೂಲಿ ಮಾಡಿ ಪರಾರಿಯಾಗಿದ್ದ.
ಮಳೆ ಬರುತ್ತಿದೆ ಎಂದು ರಸ್ತೆ ಪಕ್ಕದ ಅಂಗಡಿ ಬಳಿ ಒಂದಷ್ಟು ಜನರು ನಿಂತಿದ್ದರು. ಅದೇ ವೇಳೆಗೆ ಯುವಕನೊಬ್ಬ ಅಲ್ಲಿಗೆ ಬಂದಿದ್ದು, ಕೆಲವೇ ಕ್ಷಣಗಳಲ್ಲಿ ಉಡುಪಿನೊಳಗೆ ಮರೆಯಾಗಿಟ್ಟುಕೊಂಡಿದ್ದ ಮಚ್ಚನ್ನು ಏಕಾಏಕಿ ಹೊರಕ್ಕೆ ತೆಗೆದು ಬೀಸಿದ್ದಾನೆ. ಆಗ ಅಲ್ಲಿದ್ದ ಸಾರ್ವಜನಿಕರೆಲ್ಲ ಬೆಚ್ಚಿಬಿದ್ದಿದ್ದು, ತಕ್ಷಣ ಅಲ್ಲಿಂದ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಬಳಿಕ ಆತ ಮಚ್ಚು ತೋರಿಸಿ ಅಂಗಡಿಯವನಿಗೆ ಎಚ್ಚರಿಕೆ ನೀಡುತಿದ್ದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವೈರಲ್ ಆಗಿತ್ತು. ವಿಡಿಯೋ ತುಣುಕು ಆಧರಿಸಿ ತನಿಖೆ ನಡೆಸುವುದಾಗಿ ಸ್ಥಳೀಯ ಪೊಲೀಸರು ಹೇಳಿದ್ದರು. ಇದೀಗ ಆರೋಪಿ ಅರ್ಫಾಜ್ ನನ್ನು ಬಂಧಿಸಿದ್ದಾರೆ.
Advertisement