ಶಿರಸಿ: ಪಾಕಿಸ್ತಾನದ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿದ ಆರೋಪದಡಿ ಶಿರಸಿ ಮೂಲದ ಯುವಕನೋರ್ವನನ್ನು ಎಎನ್ಐ ತಂಡ ಬಂಧಿಸಿದೆ.
ಸಯ್ಯದ್ ಇದ್ರಿಸ್ ಸಾಬ್ ಮುನ್ನಾ ಬಂಧಿತ ಆರೋಪಿ. ರಾಷ್ಟ್ರೀಯ ತನಿಖಾ ದಳದ (ಎನ್ಐಎ) ಪಶ್ಚಿಮ ಬಂಗಾಳ ವಿಭಾಗದ ತಂಡ ಬುಧವಾರ ನಸುಕಿನ ಜಾವ ಯುವಕನನ್ನು ಬಂಧಿಸಿ, ವಿಚಾರಣೆಗೆ ಕರೆದೊಯ್ದಿದೆ. ಬಂಧಿತ ಸಯ್ಯದ್ ಇದ್ರಿಸ್ ಸಾಬ್ ಮುನ್ನಾ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯರೊಬ್ಬರ ಮಗ ಎಂದು ತಿಳಿದುಬಂದಿದೆ. ಈತ ಪಾಕಿಸ್ತಾನದಿಂದ ಕಾರ್ಯನಿರ್ವಹಿಸಿದ ಉಗ್ರ ಸಂಘಟನೆಯೊಂದರ ಸದಸ್ಯರೊಂದಿಗೆ ದೂರವಾಣಿ ಸಂಪರ್ಕ ಹೊಂದಿದ್ದ. ಅಲ್ಲದೆ ನಿರಂತರ ವಾಟ್ಸಾಪ್ ಚಾಟಿಂಗ್ ಕೂಡ ನಡೆಸಿದ್ದ ಎಂಬ ಆರೋಪವಿದೆ.
ಈ ಹಿನ್ನೆಲೆಯಲ್ಲಿ ಎನ್ಐಎ ಅಧಿಕಾರಿಗಳು ಕಳೆದ ತಿಂಗಳು ಎರಡು ಬಾರಿ ಯುವಕನ ವಿಚಾರಣೆ ನಡೆಸಿದ್ದರು. ಕಳೆದ ಒಂದು ತಿಂಗಳ ಹಿಂದಷ್ಟೆ ಎನ್.ಐ.ಎ ತಂಡ ಶಿರಸಿ ಯಲ್ಲಿ ಬೀಡು ಬಿಟ್ಟಿತ್ತು. ಇಲ್ಲಿನ ಸೈಯದ್ ನನ್ನು ಕೂಡಾ ತೀವ್ರ ವಿಚಾರಣೆ ನಡೆಸಿತ್ತು. ಕೆಲವಷ್ಟು ಸಾಕ್ಷ್ಯ ಪುರಾವೆಗಳನ್ನ ಸಂಗ್ರಹ ಮಾಡಿ ಹೋಗಿತ್ತು. ಇದೀಗ ನಂಟು ಹೊಂದಿರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮಂಗಳವಾರ ಶಿರಸಿಗೆ ಆಗಮಿಸಿದ್ದ ಎನ್ಐಎ ತಂಡ ಯುವಕನನ್ನು ಬಂಧಿಸಿ ಬುಧವಾರ ನಸುಕಿನ ಜಾವ ಕರೆದೊಯ್ದಿದೆ.
ಈ ಬಗ್ಗೆ ಮಾಹಿತಿ ಉತ್ತರ ಕನ್ನಡ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಶಿವಪ್ರಕಾಶ್ ದೇವರಾಜು ಖಚಿತ ಪಡಿಸಿದ್ದಾರೆ. ಪಾಕಿಸ್ತಾನದ ಉಗ್ರ ಸಂಘಟನೆ ಜೊತೆ ಸೈಯದ್ ನಂಟಿರುವ ಹಿನ್ನಲೆಯಲ್ಲಿ ಬಂಧಿಸಲಾಗಿದೆ. ಇವತ್ತಿನ ಬಂಧನ ಕಾರ್ಯಾಚರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ ಪೋಲಿಸರು ಸಹಕರಿಸಿದ್ದರು ಎಂದು ಹೇಳಿದ್ದಾರೆ.
Advertisement