ಬೆಂಗಳೂರು: ಬೆಂಗಳೂರಿನ ಮೈಸೂರು ರಸ್ತೆಯ ಹೊಸಗುಡ್ಡದಹಳ್ಳಿಯ ಬಾಪೂಜಿನಗರದಲ್ಲಿ ರಾಸಾಯನಿಕ ಕಾರ್ಖಾನೆಯಲ್ಲಿ ಸಂಭವಿಸಿದ್ದ ಬೆಂಕಿ ಅವಘಡ ಸಂಬಂಧ, ಕಾರ್ಖಾನೆ ಮಾಲೀಕ ಸಜ್ಜನ್ ರಾವ್ ಹಾಗೂ ಕಂಪನಿ ಉದ್ಯೋಗಿ ಅನಿಲ್ ಎಂಬುವರನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ಪೋಟಕ ವಸ್ತುಗಳ ಕಾಯ್ದೆಯಡಿ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಘಟನೆ ನಂತರ ತಲೆಮರೆಸಿಕೊಂಡಿದ್ದ ಸಜ್ಜನ್ ರಾವ್ ಹಾಗೂ ಅನಿಲ್ ಅವರನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಅವರು ತಿಳಿಸಿದ್ದಾರೆ.
ನಿನ್ನೆ ಬೆಳಗ್ಗೆ ಗೋಡೌನ್ ನಲ್ಲಿ ಸಣ್ಣ ಪ್ರಮಾಣದಲ್ಲಿ ಕಾಣಿಸಿಕೊಂಡ ಬೆಂಕಿಯು ಭಾರೀ ಪ್ರಮಾಣದಲ್ಲಿ ಹರಡಿ ಆತಂಕ ಸೃಷ್ಟಿಯಾದ ಬೆನ್ನಲ್ಲೇ ಅಕ್ಕಪಕ್ಕದ ಮನೆಯವರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಕಾರ್ಖಾನೆಯಲ್ಲಿದ್ದ ನಾಲ್ವರು ಹೊರಗೆ ಓಡಿ ಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ಬೆಂಕಿಯು ಬೃಹತ್ ಪ್ರಮಾಣದಲ್ಲಿ ಹರಡಿ ಅಕ್ಕಪಕ್ಕದ ಮನೆಗಳಿಗೆ ಆವರಿಸ ತೊಡಗಿತ್ತು. ಸುದ್ದಿ ತಿಳಿದ ತಕ್ಷಣವೇ ಅಗ್ನಿಶಾಮಕ ವಾಹನಗಳು ಧಾವಿಸಿ ಕಾರ್ಯಚರಣೆ ಕೈಗೊಂಡು ಬೆಂಕಿ ನಿಯಂತ್ರಿಸಿದ್ದರು.
Advertisement