ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಪೊಲೀಸರ ಪಿಸ್ತೂಲ್ ಸದ್ದು ಮಾಡಿದೆ. ನಟೋರಿಯಸ್ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಬ್ಯಾಡರಹಳ್ಳಿಯಲ್ಲಿ ನಡೆದಿದೆ.
ಸಂಘಟಿತ ಅಪರಾಧ ದಳ ಎಸಿಪಿ ಜಗನ್ನಾಥ್ ರೈ ನೇತೃತ್ವದ ತಂಡ ರೌಡಿಶೀಟರ್ ಬೋಂಡಾ ಮಂಜನನ್ನು ಬಂಧನಕ್ಕೆ ಕಾರ್ಯಚರಣೆ ನಡೆಸುತ್ತಿತ್ತು.
ತಲಘಟ್ಟಪುರ ಠಾಣೆ ರೌಡಿಶೀಟರ್ ಮಂಜ ಅಲಿಯಾಸ್ ಬೊಂಡ ಮಂಜನ ವಿರುದ್ದ ಬರೋಬ್ಬರಿ 23 ಪ್ರಕರಣಗಳು ದಾಖಲಾಗಿದ್ದವು.
ಕಳೆದ ಒಂದು ತಿಂಗಳಿನಿಂದ ಆರೋಪಿ ಪತ್ತೆಗಾಗಿ ಸಿಸಿಬಿ ಪೊಲೀಸರು ಕಾರ್ಯಚರಣೆ ನಡೆಸುತ್ತಿತ್ತು. ಕೋಣನಕುಂಟೆಯಲ್ಲಿ ಆರೋಪಿ ಚಲವಲನದ ಬಗ್ಗೆ ಇಂದು ಖಚಿತ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಇನ್ಸ್ ಪೆಕ್ಟರ್ ಪುನೀತ್ ಮತ್ತು ತಂಡ ಆರೋಪಿಯನ್ನು ಬಂಧಿಸಲು ತೆರಳಿದ್ದರು.
ಈ ವೇಳೆ ಬೈಕ್ನಲ್ಲಿ ನಾರಾಯಣನಗರ ಬಳಿ ಪರಾರಿಯಾಗುತ್ತಿದ್ದ ಮಂಜನನ್ನ ಪೊಲೀಸರು ಅಡ್ಡಗಟ್ಟಿದ್ದಾರೆ. ಬಳಿಕ ರೌಡಿ ಮಂಜ ಏಕಾಏಕಿ ಸಿಸಿಬಿ ಮುಖ್ಯಪೇದೆ ನಾಗರಾಜ್ ಕೈಗೆ ಡ್ರ್ಯಾಗರ್ನಿಂದ ಹಲ್ಲೆ ಮಾಡಿದ್ದಾನೆ. ಈ ಹಿನ್ನೆಲೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಪುನೀತ್ ಕುಮಾರ್ ಅವರು ಆತ್ಮರಕ್ಷಣೆಗಾಗಿ ಆರೋಪಿ ಬೊಂಡ ಮಂಜನ ಎಡ ಮೊಣಕಾಲಿಗೆ ಗುಂಡು ಹಾರಿಸಿದ್ದಾರೆಂದು ತಿಳಿದುಬಂದಿದೆ. ಮೊದಲಿಗೆ ಗಾಳಿಯಲ್ಲಿ ಗುಂಡು ಹಾರಿಸಿದ ಇನ್ಸ್ಪೆಕ್ಟರ್ ಪುನೀತ್, ಮಂಜನನ್ನು ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದಾಗ್ಯೂ ಪ್ರತಿರೋಧವೊಡ್ಡಿ ಇನ್ಸ್ಪೆಕ್ಟರ್ ಮೇಲೂ ಹಲ್ಲೆಗೆ ಮುಂದಾಗಿದ್ದಾನೆ. ಬಳಿಕ ಆತ್ಮರಕ್ಷಣೆಗಾಗಿ ರೌಡಿ ಮಂಜ ಅಲಿಯಾಸ್ ಬೊಂಡಮಂಜನ ಕಾಲಿಗೆ ಗುಂಡು ಹಾರಿಸಿ ರೌಡಿಶೀಟರ್'ನನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಗಾಯಾಳು ಹೆಚ್ ಸಿ ನಾಗರಾಜ್ ಮತ್ತು ರೌಡಿಶೀಟರ್ ಮಂಜನನ್ನು ಚಿಕಿತ್ಸೆಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.
Advertisement