ಬಳ್ಳಾರಿ ಜಿಲ್ಲೆ ಇಬ್ಭಾಗದ ನೋವು ಸದಾ ಕಾಡುತ್ತದೆ: ಶಾಸಕ ಸೋಮಶೇಖರ್ ರೆಡ್ಡಿ

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಪ್ರತ್ಯೇಕವಾಗಿ ರಚಿಸುತ್ತಿರುವ ಸರ್ಕಾರದ ನಿರ್ಧಾರ ನೋವು ತಂದಿದ್ದು, ಎಂದಿಗೂ ಜಿಲ್ಲೆಯ ಇಬ್ಭಾಗದ ನೋವು ತಮ್ಮನ್ನು ಸದಾ ಕಾಡುತ್ತದೆ ಎಂದು ‌ನಗರ ಬಿಜೆಪಿ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.
ಸೋಮಶೇಖರ್ ರೆಡ್ಡಿ
ಸೋಮಶೇಖರ್ ರೆಡ್ಡಿ

ಬಳ್ಳಾರಿ: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಪ್ರತ್ಯೇಕವಾಗಿ ರಚಿಸುತ್ತಿರುವ ಸರ್ಕಾರದ ನಿರ್ಧಾರ ನೋವು ತಂದಿದ್ದು, ಎಂದಿಗೂ ಜಿಲ್ಲೆಯ ಇಬ್ಭಾಗದ ನೋವು ತಮ್ಮನ್ನು ಸದಾ ಕಾಡುತ್ತದೆ ಎಂದು ‌ನಗರ ಬಿಜೆಪಿ ಶಾಸಕ‌ ಜಿ.ಸೋಮಶೇಖರ್ ರೆಡ್ಡಿ ಹೇಳಿದ್ದಾರೆ.

ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಆಡಿಯಲ್ಲಿ ನಗರದ ಮಿಲ್ಲರ್ ಪೇಟೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಧತ್ವ ನಿಯಂತ್ರಣ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿಜಯನಗರ ಜಿಲ್ಲೆ ವಿಭಜನೆ ಹೋರಾಟಕ್ಕೆ ಸಂಬಂಧಿಸಿದಂತೆ ತೀವ್ರ ಅಸಹಾಯಕತೆ ವ್ಯಕ್ತಪಡಿಸಿದ ಶಾಸಕರು, ಇತ್ತೀಚೆಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಭಜನೆ ಮಾಡದಿರುವಂತೆ ಮನವಿ ಮಾಡಲಾಗಿದೆ. ಜಿಲ್ಲೆಯು ಇಂದಲ್ಲ ನಾಳೆ ಯಾವುದೇ ಸರ್ಕಾರ ಬಂದರೂ ವಿಭಜನೆ ಆಗುವುದು ನಿಲ್ಲಲ್ಲವೆಂದು ಮುಖ್ಯಮಂತ್ರಿ ಸೇರಿ ಅನೇಕ ಹಿರಿಯ ಸಚಿವರು ಹೇಳಿದ್ದು, ಪ್ರತಿರೋಧ ಕೈಬಿಡಲು ತಿಳಿಸಿದ್ದಾರೆ ಎಂದರು.

ಬಳ್ಳಾರಿ ವಿಭಜನೆಯಾಗದೇ ಅಖಂಡವಾಗಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಜಿಲ್ಲೆಯ ಎಲ್ಲಾ ಶಾಸಕರು ಬಯಸಿದರೇ ಮತ್ತೊಮ್ಮೆ ಮುಖ್ಯಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗುತ್ತೇನೆ ಎಂದರು.

ವಿಜಯನಗರ ಜಿಲ್ಲೆಯ ರಚನೆ ವಿರೋಧಿಸಿ ವಿವಿಧ ಸಂಘಟನೆಗಳು ನ. 26ರಂದು ಬಳ್ಳಾರಿ ಬಂದ್ ಗೆ ಕರೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ಭಾಗವಾಗಿ ನೇರವಾಗಿ ಬೆಂಬಲಿಸಲ್ಲ. ಅವರ ಬಂದ್ ಯಶಸ್ವಿಯಾಗಲಿ ಎಂದು ಆಶಿಸಿದರು.

ಜಿಲ್ಲೆಯಲ್ಲಿ ವಿಧಾನಪರಿಷತ್ ಸದಸ್ಯ ಕೊಂಡಯ್ಯ ಬಿಟ್ಟರೇ ಬೇರೆ ಯಾರು ಇಬ್ಭಾಗಕ್ಕೆ ಬೆಂಬಲಿಸಿಲ್ಲ.‌ ಸಚಿವ ಶ್ರೀರಾಮುಲು ಸಹಮತ ವ್ಯಕ್ತಪಡಿಸಿರುವುದು ಅವರು ವೈಯಕ್ತಿಕ ವಿಚಾರ ಎಂದರು.

ಮರಾಠ ನಿಗಮ ರಚನೆ ಕುರಿತು ಪ್ರತಿಕ್ರಿಯಿಸಿದ ಅವರು, ಜಾತಿಗೊಂದು ನಿಗಮ ಮಾಡುವುದು ಸರಿಯಲ್ಲ. ನಿಗಮದ ಬದಲಿಗೆ ಸರಕಾರವು ಎಲ್ಲಾ ಜಾತಿಗಳಲ್ಲಿನ ಬಡಜನರಿಗೆ ಸಹಾಯ ಮಾಡುವ ಕೆಲಸ ಮಾಡಲಿ ಎಂದರು.
ಈ ಸಂದರ್ಭದಲ್ಲಿ ಮುಖಂಡ ಶ್ರೀನಿವಾಸ್ ಮೋತ್ಕರ್ ಮತ್ತಿತರರು ಇದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com