ಬೆಂಗಳೂರು: ಕೊರೋನಾ ಸವಾಲಿನ ನಡುವೆಯೇ ದೇಶದ ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಸಂಪೂರ್ಣ ವರ್ಚುವಲ್ ರೂಪದಲ್ಲಿ ನಡೆದ ಮೂರು ದಿನಗಳ ಬೆಂಗಳೂರು ತಂತ್ರಜ್ಞಾನ ಸಮಾವೇಶ-2020 ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಸಂಪೂರ್ಣ ವರ್ಚುವಲ್ ರೂಪದಲ್ಲೇ ನಡೆದ ತಂತ್ರಜ್ಞಾನ ಶೃಂಗದಲ್ಲಿ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದ ರಾಜ್ಯದ 5 ಸಂಸ್ಥೆಗಳು ಗುರುತಿಸಲ್ಪಟ್ಟಿತು. ರಾಜ್ಯದ ಈ 5 ಸಂಸ್ಥೆಗಳಿಗೆ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ್ ಅವರು 'ಸ್ಮಾರ್ಟ್ ಬಯೋ ಪ್ರಶಸ್ತಿಟ ಪ್ರದಾನ ಮಾಡಿದರು.
ಫೈಬ್ರೋಹೀಲ್ ವೂಂಡ್ಕೇರ್ ಪ್ರೈವೇಟ್ ಲಿಮಿಟೆಡ್'ಗೆ ವರ್ಷದ ನವೋದ್ಯಮ ಪ್ರಶಸ್ತಿ, ಇರ್ಬಮ್ ಟೆಕ್ನಾಲಜೀಸ್ ಸಂಸ್ಥಾಪಕ ನಿವೇದಿತ್ ಡೇಗೆ ವರ್ಷದ ಆವಿಷ್ಕಾರಿ ಪ್ರಶಸ್ತಿ, ಝೂಮುಟರ್ ಬಯಾಲಜಿಕ್ಸ್ ಪ್ರೈವೇಟ್ ಲಿಮಿಟೆಡ್ ಸಹ ಸಂಸ್ಥಾಪಕಿ ಕವಿತಾ ಅಯ್ಯರ್ ರೋಡ್ರಿಗಸ್ಗೆ ವರ್ಷದ ಮಹಿಳಾ ಉದ್ಯಮಿ ಪ್ರಶಸ್ತಿ, – ಷಣ್ಮುಖ ಇನ್ನೋವೇಷನ್ಸ್ ಪ್ರೈವೇಟ್ ಲಿಮಿಟೆಡ್ನ ಮೊಬೈಲ್ ಇನ್ಫೆಕ್ಷನ್ ಟೆಸ್ಟಿಂಗ್ ಅಂಡ್ ರಿಪೋರ್ಟಿಂಗ್ (ಎಂಐಟಿಆರ್) ಲ್ಯಾಬ್ಸ್'ಗೆ ಅತ್ಯುತ್ತಮ ಕೋವಿಡ್ ಸಂಬಂಧಿ ಉತ್ಪನ್ನ ಪ್ರಶಸ್ತಿ, ಪೌರ ಕಾರ್ಮಿಕರ ಸಮಸ್ಯೆ ಕುರಿತು ಕೆಲಸ ಮಾಡುತ್ತಿರುವ ಜಲೋದ್ಬಸ್ತ್'ಗೆ ಅತ್ಯುತ್ತಮ ಸಾಮಾಜಿಕ ಉದ್ಯಮ ಪ್ರಶಸ್ತಿಯನ್ನು ನೀಡಲಾಯಿತು.
ಬೆಂಗಳೂರಿನಲ್ಲಿ ಮೂರು ದಿನಗಳ ಕಾಲ ನಡೆದ ಈ ಶಂಗವು ಬರೋಬ್ಬರಿ 2.5 ಕೋಟಿ ಮಂದಿ ದೇಶ ಹಾಗೂ ವಿದೇಶಿಗರನ್ನು ತಲುಪಿದೆ.
ಇಂತಹದ್ದೊಂದು ಸಮಾವೇಶವನ್ನು ಸಮರ್ಪಕವಾಗಿ ಆಯೋಜಿಸಿದ ರಾಜ್ಯ ಸರ್ಕಾರದ ಕ್ಷಮತೆಗೆ ಜಿಐಎ ಮೈತ್ರಿಕೂಟದ ದೇಶಗಳು ಅಚ್ಚರಿ ವ್ಯಕ್ತಪಡಿಸಿವೆ ಎಂದು ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಅಶ್ವತ್ಥ್ ನಾರಾಯಣ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
Advertisement