ಎರಡೂವರೆ ವರ್ಷ ಅಧಿಕಾರದಲ್ಲಿರುತ್ತೇನೆ, ಅಷ್ಟರೊಳಗೆ ಕಾಮಗಾರಿ ಮುಗಿಸಿ: ಸಿಎಂ ಯಡಿಯೂರಪ್ಪ

ನನಗೆ ಇನ್ನು ಎರಡೂವರೆ ವರ್ಷ ಕಾಲಾವಕಾಶವಿದೆ. ಅಷ್ಟರೊಳಗೆ ನಾನು ಹಮ್ಮಿಕೊಂಡಿದ್ದ ಕೆಲಸಗಳನ್ನು ಆದಷ್ಟು ಶೀಘ್ರವಾಗಿ ಮುಗಿಸುವ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.
ದೇವಸ್ಥಾನ ಸಂಕೀರ್ಣದ ಪುನರ್ ನಿರ್ಮಾಣಕ್ಕೆ ಸಿಎಂ ಚಾಲನೆ
ದೇವಸ್ಥಾನ ಸಂಕೀರ್ಣದ ಪುನರ್ ನಿರ್ಮಾಣಕ್ಕೆ ಸಿಎಂ ಚಾಲನೆ

ಮೈಸೂರು: ನನಗೆ ಇನ್ನು ಎರಡೂವರೆ ವರ್ಷ ಕಾಲಾವಕಾಶವಿದೆ. ಅಷ್ಟರೊಳಗೆ ನಾನು ಹಮ್ಮಿಕೊಂಡಿದ್ದ ಕೆಲಸಗಳನ್ನು ಆದಷ್ಟು ಶೀಘ್ರವಾಗಿ ಮುಗಿಸುವ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಹೇಳಿದ್ದಾರೆ.

ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನದ ಸಂಕೀರ್ಣದ ಪುನರ್ ನಿರ್ಮಾಣ ಶಂಕು ಸ್ಥಾಪನೆಗೆ ಚಾಲನೆ ನೀಡಿ‌ ಮಾತನಾಡಿದ ಸಿಎಂ, ಅಭಿನವ ಶ್ರೀಶೈಲ ಎಂದೇ ಕರೆಯಲ್ಪಡುವ ಮುಡುಕುತೊರೆಯ ಭ್ರಮರಾಂಬಾ ಸಮೇತ ಮಲ್ಲಿಕಾರ್ಜುನ ದೇವಸ್ಥಾನದ ಸಂಕೀರ್ಣ ಎರಡು ವರ್ಷದ ಒಳಗೆ ಪುನರ್ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಎಂದು ಅವರು ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ತಲಕಾಡು‌ ಹಾಗೂ ಮುಡುಕುತೊರೆ ಆಕರ್ಷಣೀಯ ಕೇಂದ್ರವಾಗಿದ್ದು, ದಕ್ಷಿಣ ಕಾಶಿ ಎಂದೇ ಪ್ರಖ್ಯಾತವಾಗಿದೆ. ದೇವಸ್ಥಾನ ಪುನರ್ ನಿರ್ಮಾಣಕ್ಕೆ 30 ಕೋಟಿ ರೂ. ವೆಚ್ಚದಲ್ಲಿ‌ ಯೋಜನೆ ರೂಪಿಸಲಾಗಿದೆ. ಈಗಾಗಲೇ 5 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಒಂದು ವಾರದೊಳಗೆ 10 ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಗುತ್ತಿಗೆದಾರರು ಹಗಲು ರಾತ್ರಿ ಕೆಲಸ ಮಾಡಿ 2 ವರ್ಷದೊಳಗೆ ಕಾಮಗಾರಿ ಪೂರ್ಣಗೊಳಿಸಿ ಎಂದು ಸೂಚನೆ ನೀಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಈ ಕ್ಷೇತ್ರಕ್ಕೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಬೇಕೆಂದು ಸೂಚನೆ ನೀಢಿದರು.

ರಾಜ್ಯದ 136 ದೇವಾಲಯಗಳಿಗೆ‌ 136 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ದೇವರ ಹಣವನ್ನು ದೇವಾಲಯಗಳ ಅಭಿವೃದ್ದಿಗೆ ನೀಡುವುದರಲ್ಲಿ ತಪ್ಪೇನಿಲ್ಲ. ರಾಜ್ಯದಲ್ಲಿ ಧಾರ್ಮಿಕ ಕಾರ್ಯಗಳಿಗೆ ಹಣದ ಕೊರತೆ ಎದುರಾಗುವುದಿಲ್ಲ. ಸಾಮಾನ್ಯವಾಗಿ ಸುತ್ತೂರು ಶ್ರೀಗಳು ಇಂತಹ‌‌ ಕಾರ್ಯ ಕ್ರಮಗಳಿಗೆ ಬರುವುದು ಅಪರೂಪ. ಮಲ್ಲಿಕಾರ್ಜುನ್ ದೇವರು ಇಲ್ಲಿಗೆ ಅವರನ್ನು ಕರೆಸಿಕೊಂಡಿದ್ದಾನೆ‌ ಎಂದರು.
 
ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಮಾತನಾಡಿ, ದೇವಸ್ಥಾನದ ಕಾಮಗಾರಿಗೆ 15 ಕೋಟಿ‌ ರೂ‌‌‌. ಮಂಜೂರು ಮಾಡಿದ್ದಾರೆ. 2020ನೇ ಸಾಲಿನಲ್ಲಿ ಪಂಚಲಿಂಗ ದರ್ಶನದ ರಸ್ತೆಗಳ ಅಭಿವೃದ್ಧಿಗಾಗಿ 17 ಕೋಟಿ ರೂ. ನೀಡಲು ಸೂಚನೆ ಕೊಟ್ಟಿದ್ದಾರೆ. ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕಟ್ಟಡ, ರಸ್ತೆ, ದುರಸ್ಥಿ ಕಾಮಗಾರಿಗೆ ಲೋಕೋಪಯೋಗಿ ಇಲಾಖೆಯಿಂದ ಕೆಲಸ ಮಾಡಲು 52 ಕೋಟಿ ರೂ. ನೀಡಿದ್ದಾರೆ ಎಂದು ತಿಳಿಸಿದರು.

ಶಾಸಕ ಅಶ್ವಿನ್ ಕುಮಾರ್ ಮಾತನಾಡಿ, ತಿ.ನರಸೀಪುರ ಕ್ಷೇತ್ರವನ್ನು ಪ್ರವಾಸಿ ಪಟ್ಟಿಗೆ ಸೇರಿಸಿಬೇಕು, ತಲಕಾಡು ಹೋಬಳಿಯನ್ನು ಪಟ್ಟಣ ಪಂಚಾಯತ್‌ಗೆ ಸೇರಿಸಿಬೇಕು, ತಲಕಾಡಿನಲ್ಲಿರುವ ಐತಿಹಾಸಿಕ ಅವಶೇಷಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಸ್ತು ಪ್ರದರ್ಶನ ಮಾಡಬೇಕು ಹಾಗೂ ಪಂಚಲಿಂಗ ದರ್ಶನಕ್ಕೆ ಒತ್ತು ಕೊಡಬೇಕು ಎಂದು ಮುಖ್ಯಮಂತ್ರಿಗೆ ಅವರು ಮನವಿ ಮಾಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com