ಬೆಂಗಳೂರು: ಪ್ರತಿಭಟನೆ, ರ್ಯಾಲಿಗಳ ಸಮಯದಲ್ಲಿ ಕೋವಿಡ್-19 ನಿಯಮ ಉಲ್ಲಂಘಟನೆಯಾಗುತ್ತಿರುವ ಬಗ್ಗೆ ಮತ್ತು ಬರುವ ಡಿಸೆಂಬರ್ 5ರಂದು ನಡೆಸಲು ಉದ್ದೇಶಿಸಿರುವ ರಾಜ್ಯ ಬಂದ್ ವೇಳೆ ಕೋವಿಡ್-19 ನಿಯಮ ಉಲ್ಲಂಘನೆಯಾಗದಂತೆ ಹೇಗೆ ನೋಡಿಕೊಳ್ಳುತ್ತೀರೆಂದು ವಿವರಣೆ ಕೋರಿ ಹೈಕೋರ್ಟ್ ರಾಜಕೀಯ ಪಕ್ಷಗಳಿಗೆ ನೊಟೀಸ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ನೇತೃತ್ವದ ವಿಭಾಗೀಯ ಪೀಠ, ಡಿಸೆಂಬರ್ 2ರೊಳಗೆ ಪ್ರತಿಕ್ರಿಯೆ ನೀಡುವಂತೆ ಕೂಡ ರಾಜಕೀಯ ಪಕ್ಷಗಳಿಗೆ ಸೂಚಿಸಿದೆ. ಮುಂದಿನ ವಿಚಾರಣೆ ಅಂದೇ ನಡೆಯಲಿದೆ.
ರಾಜ್ಯ ಬಂದ್ ವೇಳೆ ನಡೆಯುವ ರ್ಯಾಲಿಗಳಲ್ಲಿ ಕೋವಿಡ್-19 ನಿಯಮಗಳನ್ನು ಕಾರ್ಯಕರ್ತರು ಪಾಲಿಸುತ್ತಾರೆಯೇ ಎಂದು ಸ್ಪಷ್ಟನೆ ನೀಡಬೇಕೆಂದು ಹೈಕೋರ್ಟ್ ಸೂಚಿಸಿದೆ. ಬಿಜೆಪಿ, ಸಿಪಿಎಂ, ಕಾಂಗ್ರೆಸ್, ಜೆಡಿಎಸ್, ಕನ್ನಡ ಚಳವಳಿ ವಾಟಾಳ್ ಪಕ್ಷಗಳಿಗೆ ಹೈಕೋರ್ಟ್ ನೊಟೀಸ್ ಜಾರಿ ಮಾಡಿದೆ.
ಲೆಟ್ಝಿಕಿಟ್ ಫೌಂಡೇಶನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿ ನ್ಯಾಯಪೀಠ ರಾಜಕೀಯ ಪಕ್ಷಗಳಿಗೆ ನೊಟೀಸ್ ನೀಡಿದ್ದು, ಮರಾಠಾ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಲು ಹೊರಟಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಬಂದ್ ಗೆ ಕರೆ ನೀಡಿದ್ದು ಅದಕ್ಕೆ ವಿವಿಧ ರಾಜಕೀಯ ಪಕ್ಷಗಳ ಬೆಂಬಲವಿದೆ.
Advertisement