ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಚಿಂದಿ ಆಯುವವರ ಅವ್ಯವಸ್ಥೆಯನ್ನು ಸರಿಪಡಿಸಿ, ಕೆಲಸದ ಪರಿಸ್ಥಿತಿಯನ್ನು ಸುಧಾರಿಸುವ 'ಸಾಮೂಹಿಕ ಶಕ್ತಿ' ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಸ್ವೀಡನ್ ಮೂಲದ ಹೆಚ್ ಮತ್ತು ಎಂ ಫೌಂಡೇಶನ್ ಧನ ಸಹಾಯ ಪಡೆದ ಈ ಕಾರ್ಯಕ್ರಮವನ್ನು ಬಿಬಿಎಂಪಿಯ ಬೆಂಬಲ ಹೊಂದಿದೆ. ಬಿಬಿಸಿ ಮೀಡಿಯಾ ಆಕ್ಷನ್, ಕೇರ್, ಹಸಿರು ದಲಾ, ಲೇಬರ್ ನೆಟ್, ಸೇವ್ ದಿ ಚಿಲ್ಡ್ರನ್, ಸೋಷಿಯಲ್ ಆಲ್ಫಾ, ವಾಟರ್ ಏಡ್ ಮತ್ತು ದಿ / ನಡ್ಜ್ ಫೌಂಡೇಶನ್ ಸಹ ಈ ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ.
ಸುರಕ್ಷಿತ ಮತ್ತು ಘನತೆಯ ಜೀವನವನ್ನು ನಡೆಸಲು ಹೆಚ್ಚಿನ ಏಜೆನ್ಸಿಯನ್ನು ಹೊಂದಲು ಚಿಂದಿ ಆಯುವವರಿಗೆ ಅನುವು ಮಾಡಿಕೊಡುವ ದೃಷ್ಟಿಯಿಂದ ಈ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಹೆಚ್ ಮತ್ತು ಎಂ ಫೌಂಡೇಶನ್ ಕಾರ್ಯತಂತ್ರ ಮುಖ್ಯಸ್ಥ ಮಾರಿಯಾ ಬೈಸ್ಟೆಡ್ ಹೇಳಿದರು.
ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಮಾತನಾಡಿ, ಇಲ್ಲಿಯವರೆಗೂ 8 ಸಾವಿರ ಚಿಂದಿ ಆಯುವವರನ್ನು ಗುರಿತಿಸಿ, ಐಡಿ ಕಾರ್ಡ್ ನೀಡಲಾಗಿದೆ. 198 ವಾರ್ಡ್ ಗಳಲ್ಲಿ 168 ಒಣ ತ್ಯಾಜ್ಯ ಸಂಗ್ರಹ ಕೇಂದ್ರಗಳಿವೆ. ಇಂತಹ ಮತ್ತಷ್ಟು ಕೇಂದ್ರಗಳನ್ನು ಸ್ಥಾಪಿಸುವ ಕೆಲಸ ನಡೆಯುತ್ತಿದೆ ಎಂದರು.
ಚಿಂದಿ ಆಯುವವರು ತ್ಯಾಜ್ಯವನ್ನು ಚೆನ್ನಾಗಿ ತಿಳಿದಿದ್ದು, ಕೋಟ್ಯಂತರ ರೂಪಾಯಿಗಳನ್ನು ಉಳಿಸಲು ಸರ್ಕಾರಕ್ಕೆ ಸಹಾಯ ಮಾಡುತ್ತಿದ್ದಾರೆ ಎಂದು ಬಿಬಿಎಂಪಿ ಅಧಿಕಾರಿಗಳು ಮತ್ತು ತಜ್ಞರು ಒಪ್ಪಿಕೊಂಡರು. ತ್ಯಾಜ್ಯ ಸಂಗ್ರಾಹಕರು ಅತ್ಯಂತ ಕಡಿಮೆ ಇದ್ದರೂ, ಈ ವೆಚ್ಚವನ್ನು ಉಳಿಸುವಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂದು ಅವರು ಹೇಳಿದರು.
ಮೊದಲ ಮೂರು ವರ್ಷಗಳಲ್ಲಿ ಸಾಮೂಹಿಕ ಶಕ್ತಿ ಕಾರ್ಯಕ್ರಮದಿಂದ ಚಿಂದಿ ಆಯುವವರು ಮತ್ತು ಅವರ ಕುಟುಂಬಗಳಿಗೆ ಹೆಚ್ಚಿನ ಸ್ಥಿರ ಆದಾಯ ದೊರೆಯಲಿದೆ. ಕೆಲಸದ ಪರಿಸ್ಥಿತಿ ಸುಧಾರಿಸಲಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದಿಂದ ಕೈಗೆಟುಕುವ ಮತ್ತು ಗುಣಮಟ್ಟದ ಸೇವೆ ಲಭ್ಯವಾಗಲಿದೆ. ಹಿಂಸೆ ಮತ್ತು ಮಾದಕ ದ್ರವ್ಯ ಸೇವನೆಯ ಸಂತ್ರಸ್ತರಿಗೆ ಆಸರೆ ಮತ್ತು ಒಣ ತ್ಯಾಜ್ಯ ಸಂಗ್ರಹಕಾರರ ಕೆಲಸಕ್ಕೆ ಹೆಚ್ಚಿನ ಗೌರವ ಮತ್ತು ಮಾನ್ಯತೆ ದೊರೆಯುವಂತೆ ಮಾಡಲಾಗುತ್ತಿದೆ.
Advertisement