ಬೆಂಗಳೂರು: ತಮಿಳುನಾಡು ರಾಜ್ಯದಲ್ಲಿ ಆರ್ಭಟಿಸುತ್ತಿರುವ ನಿವಾರ್ ಚಂಡಮಾರುತದ ಪ್ರಭಾವ ರಾಜ್ಯದ ಮೇಲೆ ಆಗತೊಡಗಿದೆ. ಗುರುವಾರ ಬೆಳಗಿನಿಂದಲೇ ಅಲ್ಲಲ್ಲಿ ಮಳೆಯಾಗುತ್ತಿರುವುದು ಕಂಡು ಬಂದಿದೆ.
ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ಹಲವೆಡೆ ಈಗಾಗಲೇ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಗುರುವಾರದಿಂದ 2 ದಿನ ದಕ್ಷಿಣ ಒಳನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿರುವ ಹಿನ್ನೆಲೆಯಲ್ಲಿ ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬಂಗಾಳ ಕೊಲ್ಲಿಯ ನೈಋತ್ಯ ಭಾಗದಲ್ಲಿ ಎದ್ದಿರುವ ಈ ನಿವಾರ್ ಚಂಡಮಾರುತ ಇದೀಗ ತೀವ್ರ ಸ್ವರೂಪ ತಾಳಿದ್ದು, ವಾಯುವ್ಯ ದಿಕ್ಕಿನೆಡೆಗೆ ಸಾಗುತ್ತಿದೆ. ತಮಿಳುನಾಡು, ಪುದುಚೇರಿ ಮತ್ತು ಚೆನ್ನೈ ಮಾರ್ಗವಾಗಿ ನ.26ರ ಹೊತ್ತಿಗೆ ಕಾರೈಕಲ್ ದಾಟಲಿದೆ. ಇದರಿಂದಾಗಿ ಕರ್ನಾಟಕದಲ್ಲಿ ಮಳೆ ಸುರಿಯಲಿದೆ.
ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಎರಡು ದಿನ ನಿವಾರ್ ಚಂಡಮಾರುತದ ಅಬ್ಬರ ಕಾಣಬಹುದು. ಹೀಗಾಗಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದ್ದು, ನ.26 ಮತ್ತು 27 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಪುನಃ ಇದೇ ಭಾಗದ ಕೆಲವು ಜಿಲ್ಲೆಗಳಲ್ಲಿ ನ.28 ಮತ್ತು 29ರಂದು ಅಲ್ಲಲ್ಲಿ ಸಾಮಾನ್ಯ ಮಳೆಯಾಗಲಿದೆ. ಎಲ್ಲಾ ಕಡೆಗಳಲ್ಲಿ ಮೋಡ ಮುಸುಕಿದ ಮತ್ತು ಚಳಿಯ ವಾತಾವರಣ ಇರಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ನ.26 ರಿಂದ 28ರವರೆಗೆ ಸಾಮಾನ್ಯ ಮಳೆ ಬೀಳುವ ಸಂಭವವಿದೆ. ನಂತರ ನ.29ರಂದು ತಾಪಮಾನ ಹೆಚ್ಚಾಗಲಿದ್ದು, ಒಣ ಹವೆ ಮುಂದುವರಿಯಲಿದೆ.
ನ.25ರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ 24 ಗಂಟೆಯಲ್ಲಿ ಎಲ್ಲಿಯೂ ಮಳೆಯಾಗಿಲ್ಲ. ಬದಲಿಗೆ ಚಳಿ ವಾತಾವರಣ ಸೃಷ್ಟಿಯಾಗತ್ತಿದೆ. ಗರಿಷ್ಠ ತಾಪಮಾನ ಕಾರವಾರದಲ್ಲಿ 35.4 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ ದಾವಣಗೆರೆಯಲ್ಲಿ 11.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ನಿವಾರ್ ಚಂಡಮಾರುತ ರಾಜ್ಯದ ಮೇಲೂ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಯಾವುದೇ ಸಂಭವನೀಯತೆಗೆ ಸಿದ್ಧರಾಗಿರುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ, 'ನಾವು ಚಂಡಮಾರುತವನ್ನು ನಿಲ್ಲಿಸಬಹುದೇ? ಸಾಧ್ಯವಿಲ್ಲ. ಗರಿಷ್ಠ ಹಾನಿಗಳನ್ನು ತಪ್ಪಿಸಲು ತಡೆಗಟ್ಟುವ ಕ್ರಮ ಕೈಗೊಳ್ಳುವ ಕೆಲಗಳನ್ನು ಮಾಡಬಹುದು. ಕರಾವಳಿ ಕರ್ನಾಟಕದಲ್ಲಿ ರೆಡ್ ಅಲರ್ಟ್ ಘೋಷಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement