ಬೆಳಗಾವಿ: ಕಳಸಾ-ಬಂಡೂರಿ ನಾಲಾ ಯೋಜನೆ ಮೂಲಕ ನೀರನ್ನು ಬದಲಾಯಿಸುವ ಮೂಲಕ ಮಹಾದಾಯಿ ನದಿ ನೀರಿನ ಮಟ್ಟವನ್ನು ಕರ್ನಾಟಕ ತಗ್ಗಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಆರೋಪಿಸಿದ್ದಾರೆ.
ನೀರಿನ ಹಂಚಿಕೆ ವಿವಾದ ಇತ್ಯರ್ಥವನ್ನು ಕೋರ್ಟ್ ನಿಂದ ಹೊರಗೆ ಬಗೆಹರಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಕರ್ನಾಟಕ ಸರ್ಕಾರ ಪ್ರಯತ್ನಿಸುತ್ತಿದ್ದರೂ, ತಮ್ಮ ಸರ್ಕಾರ ಯಾವುದೇ ರಾಜಿ ಸಂಧಾನಕ್ಕೆ ಬರುವುದಿಲ್ಲ, ಮಹಾದಾಯಿ ವಿವಾದವನ್ನು ಸುಪ್ರೀಂ ಕೋರ್ಟ್ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಗೋವಾ ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ.
ದೆಹಲಿಯಲ್ಲಿ ಕರ್ನಾಟಕದ ಪ್ರತಿನಿಧಿ ಶಂಕರಗೌಡ ಪಾಟೀಲ್ ಹೇಳಿಕೆ ಹೊರಡಿಸಿ ಎರಡೂ ರಾಜ್ಯಗಳ ಮಧ್ಯೆ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿ ಸಂಬಂಧವನ್ನು ವೃದ್ಧಿಪಡಿಸಲು ಗೋವಾ ಮುಖ್ಯಮಂತ್ರಿ ಉತ್ಸುಕವಾಗಿದ್ದಾರೆ ಎಂದು ಹೇಳಿಕೆ ಹೊರಡಿಸಿದ ಹಿನ್ನೆಲೆಯಲ್ಲಿ ಗೋವಾ ಸಿಎಂ ಡಾ ಸಾವಂತ್ ಈ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ಗೋವಾ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಶಂಕರಗೌಡ ಪಾಟೀಲ್, ಎರಡೂ ರಾಜ್ಯಗಳ ನಡುವೆ ಸಂಬಂಧಪಟ್ಟ ಹಲವು ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳ ಕುರಿತು ಮಾತುಕತೆ ನಡೆಸಿದ್ದಾರೆ.
Advertisement