ಬೆಂಗಳೂರು: ಶಿರಾ ಮತ್ತು ರಾಜ ರಾಜೇಶ್ವರಿ ವಿಧಾನ ಸಭಾ ಕ್ಷೇತ್ರಗಳಿಗೆ ಚುನಾವಣಾ ಆಯೋಗ ಈಗಾಗಲೇ ದಿನಾಂಕ ಪ್ರಕಟಿಸಿದೆ, ಶೀಘ್ರದಲ್ಲೇ ಮಸ್ಕಿ ಮತ್ತು ಬಸವಕಲ್ಯಾಣ ಮತ್ತು ಬೆಳಗಾವಿ ಲೋಕಸಭೆ ಕ್ಷೇತ್ರಗಳ ಚುನಾವಣೆಗೆ ದಿನಾಂಕ ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.
ಈ ಸಂಬಂಧ ದಿ ನ್ಯೂ ಇಂಡಿಂಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸಂಜೀವ್ ಕುಮಾರ್, ಸೋಮವಾರ ನಮಗೆ ಕೋರ್ಟ್ ನೊಟೀಸ್ ಸಿಕ್ಕಿದ್ದು ಮಸ್ಕಿ ಕ್ಷೇತ್ರಕ್ಕೆ ದಿನಾಂಕ ನಿಗದಿ ಪಡಿಸುವಂತೆ ಆದೇಶಿಸಿದೆ. ಅದರಂತೆ ಶೀಘ್ರವೇ ದಿನಾಂಕ ಪ್ರಕಟಿಸಲಿದೆ,
ಬಸವಕಲ್ಯಾಣ ಕ್ಷೇತ್ರದ ಶಾಸಕ ಬಿ ನಾರಾಯಣ ರಾವ್ ಕೊರೋನಾದಿಂದಾಗಿ ಇತ್ತೀಚೆಗೆ ಸಾವನ್ನಪ್ಪಿದ್ದರು. ಆದರೆ ಶಾಸಕಾಂಗ ಕಾರ್ಯದರ್ಶಿಗಳು ಇನ್ನೂ ಚುನಾವಣಾ ಆಯೋಗಕ್ಕೆ ವರದಿ ಮಾಡಿಲ್ಲ, ಈ ಪ್ರಸ್ತಾವನೆ ನವದೆಹಲಿಗೆ ಕಳುಹಿಸಿದ ನಂತರ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಬಸವ ಕಲ್ಯಾಣ ಮತ್ತು ಮಸ್ಕಿ ಎರಡು ಕಾಂಗ್ರೆಸ್ ಶಾಸಕರಿದ್ದ ಕ್ಷೇತ್ರಗಳು, ನಾವು ಎರಡು ಕ್ಷೇತ್ರಗಳ ಚುನಾವಣೆಗೆ ಸಿದ್ಧರಾಗಿದ್ದೇವೆ, ಕಳೆದ ಬಾರಿ ಕಾಂಗ್ರೆಸ್ ಅಭ್ಯರ್ಥಿ 18 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದರು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಬೆಳಗಾವಿ ಲೋಕಸಭೆ ಚುನಾವಣೆಗೂ ಸಿದ್ಧತೆ ನಡೆಸುತ್ತಿರುವುದಾಗಿ ಹೇಳಿದ್ದಾರೆ, ದಿನಾಂಕ ಪ್ರಕಟವಾಗಲು ಕಾಯುತ್ತಿದ್ದೇವೆ, ನಾವು ಕೂಡ ಚುನಾವಣೆಗೆ ಸಿದ್ಧರಾಗುತ್ತಿರುವುದಾಗಿ ಬಿಜೆಪಿ ಮುಖಂಡ ಗೋ. ಮಧುಸೂದನ ತಿಳಿಸಿದ್ದಾರೆ.
Advertisement