ಮಂಡ್ಯ: ರಾತ್ರಿ ಜೊತೆಯಲ್ಲೇ ಪಾರ್ಟಿಮಾಡಿ ಸ್ನೇಹಿತರೇ ತಮ್ಮ ಸ್ನೇಹಿತನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಶ್ರೀರಾಂಪುರ ಗ್ರಾಮ ಸಮೀಪದ ಕ್ರಷರ್ನಲ್ಲಿ ನಡೆದಿದೆ.
ಮೂಲತಃ ಮಂಡ್ಯ ತಾಲೂಕಿನ ಉಮ್ಮಡಹಳ್ಳಿ ಗ್ರಾಮದ ಲೇಟ್ ಶ್ರೀನಿವಾಸ್ ಅವರ ಪುತ್ರ ಪೂರ್ಣಚಂದ್ರ(೨೮) ಮೃತ ದುರ್ದೈವಿಯಾಗಿದ್ದು, ಪ್ರಸ್ತುತ ಶ್ರೀರಂಗಪಟ್ಟಣ ತಾಲೂಕಿನ ಜಕ್ಕನಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ಎನ್ನಲಾಗಿದೆ.
ಶ್ರೀರಂಗಪಟ್ಟಣ ತಾಲ್ಲೂಕಿನ ಶ್ರೀರಾಂಪುರ -ಗಣಂಗೂರು ಗ್ರಾಮ ಸಮೀಪದ ತನ್ನ ಚಿಕ್ಕಪ್ಪನ ಮಗನಾದ ಹರ್ಷರವರ ಕ್ರಷರ್ ರೂಮಿನಲ್ಲಿ ಪೂರ್ಣಚಂದ್ರ ತನ್ನ ಸ್ನೇಹಿತರಾದ ಪ್ರದೀಪ್ ಮತ್ತು ಚಾಮರಾಜು ಸೇರಿದಂತೆ ಹಲವರೊಂದಿಗೆ ಶುಕ್ರವಾರ ರಾತ್ರಿ ಪಾರ್ಟಿ ಮಾಡಿದ್ದಾರೆ. ಈ ವೇಳೆ ಪಾರ್ಟಿಯಲ್ಲಿ ಮದ್ಯ ಸೇವಿಸುತ್ತಿದ್ದ ದುಷ್ಕರ್ಮಿ ಸ್ನೇಹಿತರೇ ಪೂರ್ವನಿಯೋಜನೆಯಂತೆ ಪೂರ್ಣಚಂದ್ರನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿಕೊಚ್ಚಿ ಕೊಲೆಗೈದು ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಸ್ನೇಹಿತರಾದ ಜಕ್ಕನಹಳ್ಳಿಯ ಪ್ರದೀಪ್ ಮತ್ತು ಚಾಮರಾಜು ಎಂಬುವರು ತೀವ್ರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿಯೇ ಈ ದುಷ್ಕೃತ್ಯ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಘಟನೆ ಬಳಿಕ ಮಾಹಿತಿ ತಿಳಿದ ಪಿಎಸ್ಐ ಗೀರಿಶ್ ಹಾಗೂ ಪೊಲೀಸ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ಶ್ರೀರಂಗಪಟ್ಟಣ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣದಾಖಲಾಗಿದೆ.
-ನಾಗಯ್ಯ
Advertisement